ನವದೆಹಲಿ: ಪದ್ಮಾವತ್ ಚಿತ್ರ ಬಿಡುಗಡೆ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಶಾಲಾ ಮಕ್ಕಳನ್ನು ಕರೆದೊಯ್ಯುವ ವ್ಯಾನ್ ನ ಮೇಲೆ ಹರ್ಯಾಣದಲ್ಲಿ ನಡೆಸಿರುವ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿ ದೇಶದಲ್ಲಿ ದ್ವೇಷ ಮತ್ತು ಹಿಂಸೆಯ ದಳ್ಳುರಿಯನ್ನು ಹುಟ್ಟುಹಾಕುತ್ತಿದೆ ಎಂದು ಆರೋಪಿಸಿದ್ದಾರೆ.
ಚಿತ್ರ ಬಿಡುಗಡೆ ಮಾಡಿರುವುದನ್ನು ವಿರೋಧಿಸಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನದ ಮೇಲೆ ಪ್ರತಿಭಟನಾಕಾರರು ನಡೆಸಿರುವ ದಾಳಿಯನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ.
ಮಕ್ಕಳ ವಿರುದ್ಧ ನಡೆದ ಹಿಂಸಾಚಾರವನ್ನು ಸಮರ್ಥಿಸಿಕೊಳ್ಳಲು ಯಾವುದೇ ಕಾರಣವಿಲ್ಲ. ಹಿಂಸೆ ಮತ್ತು ವಿರೋಧ ದೌರ್ಬಲ್ಯದ ಅಸ್ತ್ರಗಳಾಗಿವೆ. ಬಿಜೆಪಿಯ ಹಿಂಸೆ ಮತ್ತು ದ್ವೇಷದ ಸ್ವಭಾವ ಇಡೀ ದೇಶವನ್ನು ಬೆಂಕಿಯಿಂದ ಹತ್ತಿ ಉರಿಯುವಂತೆ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಹರ್ಯಾಣದಲ್ಲಿ ಕಾನೂನು, ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಕೂಡ ಅವರು ಆಪಾದಿಸಿದ್ದಾರೆ.
ಗುರುಂಗಾವ್ ನ ಶಾಲೆಯೊಂದರಿಂದ ಸುಮಾರು 25 ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನದ ಮೇಲೆ ಪ್ರತಿಭಟನಾಕಾರರ ಗುಂಪು ದಾಳಿ ನಡೆಸಿದ್ದು ಅಪಾಯದಿಂದ ಮಕ್ಕಳು ಸ್ವಲ್ಪದರಲ್ಲಿಯೇ ಪಾರಾಗಿದ್ದಾರೆ.
ಶಾಲಾ ವಾಹನದ ಮೇಲೆ ನಡೆದ ದಾಳಿಯನ್ನು ಒಪ್ಪಲು ಸಾಧ್ಯವೇ ಇಲ್ಲ ಮತ್ತು ಮಕ್ಕಳ ಜೀವನದ ಮೇಲೆ ಚೆಲ್ಲಾಟವಾಡಲು ಹೊರಟಿರುವ ಪ್ರತಿಭಟನಾಕಾರರಿಗೆ ಧಿಕ್ಕಾರವಿದೆ ಎಂದು ಕಾಂಗ್ರೆಸ್ ಸಂವಹನ ಮುಖ್ಯಸ್ಥ ರಂದೀಪ್ ಸುರ್ಜೆವಾಲಾ ಟ್ವೀಟ್ ಮೂಲಕ ಖಂಡಿಸಿದ್ದಾರೆ.