ದೇಶ

ಮಹದಾಯಿ ಜಲಾನಯನ ಪ್ರದೇಶದ ಕಾಮಗಾರಿ ಮೇಲ್ವಿಚಾರಣೆಗೆ ವಿಶೇಷ ತಂಡ ರಚಿಸಿದ ಗೋವಾ

Lingaraj Badiger
ಪಣಜಿ: ರಾಜ್ಯದಲ್ಲಿ ಮಹದಾಯಿ ನದಿ ನೀರಿಗಾಗಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ, ಗೋವಾ ಸರ್ಕಾರ ಮಹದಾಯಿ ನದಿ ಜಲಾನಯನ ಪ್ರದೇಶದಲ್ಲಿ ಕರ್ನಾಟಕ ಅಥವಾ ಮಹಾರಾಷ್ಟ್ರ ಕಾಲುವೆ ನಿರ್ಮಾಣ ಕಾಮಗಾರಿ ಮುಂದುವರೆಸಿವೆಯೇ ಎಂಬುದರ ಬಗ್ಗೆ ಮೇಲ್ವಿಚಾರಣೆ ನಡೆಸಲು ಗುರುವಾರ ವಿಶೇಷ ತಂಡ ರಚಿಸಿದೆ.
ಈ ಸಂಬಂಧ ಗೋವಾ ಜಲ ಸಂಪನ್ಮೂಲ ಸಚಿವ ವಿನೋದ್ ಪಾಲ್ಯೆಕರ್ ಅವರು ಆದೇಶ ಹೊರಡಿಸಿದ್ದು, ಗಡಿ ಭಾಗದಲ್ಲಿ ಕರ್ನಾಟಕ ಕೈಗೊಂಡಿರುವ ಕಳಸಾ ಬಂಡೂರಿ ನಾಲಾ ಯೋಜನೆ ಕಾಮಗಾರಿ ಸ್ಥಳಕ್ಕೆ ವಾರದಲ್ಲಿ ಕನಿಷ್ಠ ಎರಡು ಬಾರಿ ಭೇಟಿ ನೀಡಿ ಪರಿಶೀಲಿಸಬೇಕು ಎಂದು ನಾಲ್ವರು ಅಧಿಕಾರಿಗಳ ತಂಡಕ್ಕೆ ಸೂಚಿಸಿದ್ದಾರೆ.
ಮಹದಾಯಿ ನದಿ ನೀರಿನ ತಿರುವು ಬದಲಿಸುವುದಾಗಿ ಕರ್ನಾಟಕ ಅಥವಾ ಮಹಾರಾಷ್ಟ್ರ ಯಾವುದೇ ಕಾಮಗಾರಿ ಕೈಗೊಂಡರು ಅದನ್ನು ತಕ್ಷಣ ಸರ್ಕಾರದ ಗಮನಕ್ಕೆ ತರಬೇಕು ಎಂದು ಮೇಲ್ವಿಚಾರಣೆ ತಂಡಕ್ಕೆ ಪಾಲ್ಯೆಕರ್ ಆದೇಶಿಸಿದ್ದಾರೆ.
ಈ ವಿಶೇಷ ತಂಡದಲ್ಲಿ ಇಬ್ಬರು ಇಂಜಿನಿಯರ್ ಗಳು, ಓರ್ವ ಸರ್ವೇಯರ್ ಹಾಗೂ ಓರ್ವ ತಾಂತ್ರಿಕ ಸಹಾಯಕರಿದ್ದಾರೆ.
ಇತ್ತೀಚಿಗೆ ವಿನೋದ್ ಪಾಲ್ಯೆಕರ್ ಅವರು ಬೆಳಗಾವಿ ಜಿಲ್ಲೆಯ ಕಣಕುಂಬಿಗೆ ಭೇಟಿ ನೀಡಿ, ಕರ್ನಾಟಕದ ಕಾಮಗಾರಿ ಪರಿಶೀಲಿಸಿದ್ದರು.
SCROLL FOR NEXT