ನವದೆಹಲಿ: ಟಿಪ್ಪು ಸುಲ್ತಾನ ವಿವಾದ ಕರ್ನಾಟಕದ ನಂತರ ಈಗ ರಾಷ್ಟ್ರ ರಾಜಧಾನಿ ದೆಹಲಿ ತಲುಪಿದ್ದು, ಆಮ್ ಆದ್ಮಿ ಪಕ್ಷದ ಸರ್ಕಾರ ಟಿಪ್ಪು ಸುಲ್ತಾನ್ ಭಾವ ಚಿತ್ರ ಸೇರಿದಂತೆ 70 ಸಾಧಕರ ಭಾವಚಿತ್ರಗಳನ್ನು ವಿಧಾನಸಭೆಯಲ್ಲಿ ಅಳವಡಿಸಿದೆ. ಇದಕ್ಕೆ ಪ್ರತಿಪಕ್ಷ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ನಿನ್ನೆಯಷ್ಟೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 70 ಸಾಧಕರ ಭಾವಚಿತ್ರಗಳನ್ನು ಅನಾವರಣಗೊಳಿಸಿದ್ದರು. ಆ ಸಾಧಕರಲ್ಲಿ ಟಿಪ್ಪು ಸುಲ್ತಾನ್, ಕಿತ್ತೂರು ರಾಣಿ ಚನ್ನಮ್ಮ, ಅಶ್ಫಾಕುಲ್ಲಾ ಖಾನ್, ಭಗತ್ ಸಿಂಗ್, ಬಿರ್ಸಾ ಮುಂಡಾ, ಸುಭಾಷ್ ಚಂದ್ರ ಬೋಸ್ ಅವರು ಇದ್ದಾರೆ.
ಇಂದು ವಿಧಾನಸಭೆ ಕಲಾಪದಲ್ಲಿ ಟಿಪ್ಪು ಭಾವಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಶಾಸಕ ಓಂ ಪ್ರಕಾಶ್ ಶರ್ಮಾ ಅವರು, ವಿಧಾನಸಭೆಯಲ್ಲಿ ವಿವಾದಾತ್ಮಕ ವ್ಯಕ್ತಿಗಳ ಚಿತ್ರಗಳನ್ನು ಹಾಕಬಾರದು ಎಂದು ಒತ್ತಾಯಿಸಿದರು.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಭಾಪತಿ ರಾಮ್ ನಿವಾಸ್ ಗೋಯಲ್ ಅವರು, ಎಲ್ಲ ವಿಷಯಗಳನ್ನೂ ವಿವಾದ ಮಾಡಲಾಗುತ್ತಿದೆ. ಭಾರತದ ಸಂವಿಧಾನದ 144ನೇ ಪುಟದಲ್ಲಿ ಟಿಪ್ಪು ಸುಲ್ತಾನನ ಚಿತ್ರವಿದೆ. ಬ್ರಿಟಿಷರ ವಿರುದ್ಧ ಹೋರಾಡಿದ ಮತ್ತು ಸಂವಿಧಾನ ರಚಿಸಿದವರನ್ನು ದೇಶದ್ರೋಹಿಗಳು ಎಂದು ಪರಿಗಣಿಸಬೇಕೆ ಅಥವಾ ಬಿಜೆಪಿಯವರನ್ನು ದೇಶದ್ರೋಹಿಗಳು ಎನ್ನಬೇಕೆ? ಎಂದರು.
ಬಿಜೆಪಿ ಇಂತಹ ಕ್ಷುಲ್ಲಕ ರಾಜಕಾರಣ ಬಿಟ್ಟು ಅಭಿವೃದ್ಧಿಯ ಕಡೆ ಗಮನ ಹರಿಸಬೇಕು ಸ್ಪೀಕರ್ ಹೇಳಿದರು.
ವಿಧಾನಸಭೆಯಲ್ಲಿ ಅಳವಡಿಸಿರುವ ಭಾವಚಿತ್ರಗಳು ಎರಡುವರೆ ಅಡಿ ಎತ್ತರ ಮತ್ತು ಒಂದುವರೆ ಅಡಿ ಅಗಲವಿವೆ. ಅವುಗಳಲ್ಲಿ ಸಾಧಕರು ದೇಶಕ್ಕೆ ನೀಡಿದ ಕೊಡುಗೆಯ ಸಂಕ್ಷಿಪ್ತ ವಿವರವೂ ಇದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos