ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಇಂದು ಸಂಸತ್ ನಲ್ಲಿ ಗುಲಾಬಿ ಬಣ್ಣದ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು. ಈ ಬಾರಿಯ ಆರ್ಥಿಕ ಸಮೀಕ್ಷೆಯ ಮುಖಪುಟದ ಬಣ್ಣ ಬದಲಾಗಿರುವುದಕ್ಕೆ ಇಲ್ಲಿದೆ ಕೆಲ ವಿಶೇಷ ಕಾರಣಗಳು.
ಲಿಂಗಾನುಪಾತದ ಸರಾಸರಿಯಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಕಡಿಮೆಯಿದ್ದು 63 ದಶಲಕ್ಷ ಮಹಿಳೆಯರ ಕೊರತೆಯಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವ ಹಾಗೂ ಮಹಿಳಾ ಸಬಲೀಕರಣವನ್ನು ಬೆಂಬಲಿಸುವ ಸಲುವಾಗಿ ಈ ಬಾರಿಯ ಆರ್ಥಿಕ ಸಮೀಕ್ಷೆಯ ಮುಖಪುಟವನ್ನು ಪಿಂಕ್ ಬಣ್ಣಕ್ಕೆ ಬದಲಾಯಿಸಲಾಗಿದೆ.
ಭಾರತದಲ್ಲಿ ಗಂಡು-ಹೆಣ್ಣು ಅನುಪಾತದಲ್ಲಿ ಭಾರಿ ವ್ಯತ್ಯಾಸವಿದೆ. ನಮ್ಮ ದೇಶದಲ್ಲಿ ಇನ್ನು ಪುತ್ರ ವ್ಯಾಮೋಹ ಇದೆ. ಗಂಡು ಮಗುವೊಂದು ಇರಲೇಬೇಕು ಎಂಬುದು ಬಹುತೇಕ ಜನರ ಆಶಯ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಭಾರತದಲ್ಲಿ ಗಂಡು ಸಂತಾನಕ್ಕಾಗಿ ಹಂಬಲಿಸುವವರ ಸಂಖ್ಯೆ ಕೋಟಿ ಕೋಟಿಗಳಲ್ಲಿದೆ. ಇದಕ್ಕಾಗಿ ಕೆಲವರು ಗಂಡು ಮಕ್ಕಳಾಗುವವರೆಗೂ ಪ್ರಯತ್ನ ಮುಂದುವರಿಸುತ್ತಿರುತ್ತಾರೆ. ಇನ್ನು ಕೆಲವರು ಮೊದಲ ಬಾರಿ ಗಂಡು ಮಗುವಾದ ಕೂಡಲೇ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಬಿಡುತ್ತಾರೆ. ಈ ರೀತಿಯ ವೈರುಧ್ಯಗಳಿಂದ ಗಂಡು-ಹೆಣ್ಣು ಅನುಪಾತದಲ್ಲಿ ಭಾರೀ ವ್ಯತ್ಯಾಸ ಕಂಡುಬಂದಿದೆ ಎಂದು ಸಮೀಕ್ಷೆ ಹೇಳಿದೆ.
ಇತ್ತೀಚಿನ ದಿನಗಳಲ್ಲಿ ಕೈಗೊಂಡಿರುವ ಆರ್ಥಿಕ ಸುಧಾರಣೆಗಳಿಂದಾಗಿ ಭಾರತ ಜಾಗತಿಕ ಮಟ್ಟದಲ್ಲಿ ಮೇಲ್ಮುಖಕ್ಕೇರಿದೆ. ವ್ಯವಹಾರ ನಡೆಸಲು ಭಾರತ ಅತ್ಯಂತ ಪ್ರಶಸ್ತ ದೇಶ ಎಂದು ಜಾಗತಿಕ ಮಟ್ಟದಲ್ಲಿಯೇ ಹೆಸರು ಪಡೆದುಕೊಂಡಿದೆ ಎಂದು ಸಮೀಕ್ಷೆಯಲ್ಲಿ ವಿವರಿಸಲಾಗಿದೆ.
2005-2006ರಲ್ಲಿ ಶೇಕಡ 36ರಷ್ಟು ಮಹಿಳೆಯರು ಕೆಲಸ ಮಾಡುತ್ತಿದ್ದು ಇದೀಗ 2015-16ರಲ್ಲಿ ಶೇಕಡ 24ರಷ್ಟು ಮಹಿಳೆಯರು ಮಾತ್ರ ಕೆಲಸ ಮಾಡುತ್ತಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos