ಲಖನೌ: ಗಣರಾಜ್ಯೋತ್ಸವದ ದಿನದಂದು ಉತ್ತರಪ್ರದೇಶದ ಕಾಸ್'ಗಂಜ್ ನಲ್ಲಿ ಭುಗಿಲೆದಿದ್ದ ಹಿಂಸಾಚಾರದಲ್ಲಿ ಮೃತಪಟ್ಟಿದ್ದಾರೆನ್ನಲಾದ ಇಬ್ಬರು ವ್ಯಕ್ತಿಗಳ ಪೈಕಿ ಒಬ್ಬನಾದ ರಾಹುಲ್ ಉಪಾಧ್ಯಾಯ ಎಂಬುವವರು ಜೀವಂತವಾಗಿದ್ದು, ನಾನು ಬದುಕಿದ್ದೇನೆ, ಆರೋಗ್ಯವಾಗಿದ್ದೇನೆಂದು ಮಂಗಳವಾರ ಹೇಳಿದ್ದಾರೆ.
ಹಿಂಸಾಚಾರದ ವೇಳೆ ರಾಹುಲ್ ಉಪಾಧ್ಯಾಯ ಹಾಗೂ ಚಂದನ್ ಗುಪ್ತ ಎಂಬುವವರು ಮೃತಪಟ್ಟಿದ್ದಾರೆಂದು ಹೇಳಲಾಗುತ್ತಿತ್ತು. ಇಬ್ಬರ ಸಾವಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ 3 ದಿನಗಳ ಕಾಲ ಕಾಸ್ಗಂಜ್'ನಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.
ವದಂತಿಗಳ ಕುರಿತಂತೆ ನನ್ನ ಗೆಳೆಯರೊಬ್ಬರು ನನಗೆ ಮಾಹಿತಿ ನೀಡಿದ್ದರು. ಕಾಸ್ಗಂಜ್ ನಲ್ಲಿ ನಡೆದಿದ್ದ ಗಲಭೆಯಲ್ಲಿ ನಾನು ಮೃತಪಟ್ಟಿದ್ದೇನೆಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳು ಹರಿದಾಡುತ್ತಿವೆ ಎಂದು ಹೇಳಿದ್ದರು. ಕಾಸ್ಗಂಜ್ ಹಿಂಸಾಚಾರದ ಸಂದರ್ಭದಲ್ಲಿ ನಾನು ಊರಿನಲ್ಲಿ ಇರಲಿಲ್ಲ. ನಾನು ನನ್ನ ಗ್ರಾಮಕ್ಕೆ ಹೋಗಿದ್ದೆ. ನಾನು ಜೀವಂತವಾಗಿದ್ದು, ಆರೋಗ್ಯವಾಗಿದ್ದೇನೆಂದು ರಾಹುಲ್ ಅವರು ಹೇಳಿದ್ದಾರೆ.
ಇದರಂತೆ ಆಲಿಗಢ ಐಡಿ ಸಂಜೀವ್ ಗುಪ್ತಾ ಅವರೂ ಕೂಡ ರಾಹುಲ್ ಉಪಾಧ್ಯಾಯ ಅವರು ಜೀವಂತವಾಗಿದ್ದಾರೆಂದು ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಕಿಡಿಗೇಡಿಗಳು ರಾಹುಲ್ ಉಪಾಧ್ಯಾಯ ಅವರು ಸಾವನ್ನಪ್ಪಿದ್ದಾರೆಂದು ವದಂತಿಗಳನ್ನು ಹರಡಿದ್ದಾರೆ. ರಾಹುಲ್ ಅವರು ಜೀವಂತವಾಗಿಯೇ ಇದ್ದು, ವದಂತಿಗಳನ್ನು ಹಬ್ಬಿಸಿದ್ದ ನಾಲ್ವರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಾಸ್ಗಂಜ್ ನಲ್ಲಿ ಕಳೆದ ಮೂರು ದಿನಗಳಿಂದಲೂ ಹಿಂಸಾಚಾರ ಭುಗಿಲೆದ್ದಿದ್ದು, ಈ ವರೆಗೂ 112 ಮಂದಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos