ದೇಶ

ಪ್ರಕರಣಗಳ ಹಂಚಿಕೆಯಲ್ಲಿ ಸಿಜೆಐಗೆ ವಿಶೇಷ ಅಧಿಕಾರ: ಸುಪ್ರೀಂ ಕೋರ್ಟ್ ಪೀಠ

Sumana Upadhyaya

ನವದೆಹಲಿ; ಸುಪ್ರೀಂ ಕೋರ್ಟ್ ನ ಸಮಾನ ನ್ಯಾಯಾಧೀಶರಲ್ಲಿ ಮುಖ್ಯ ನ್ಯಾಯಾಧೀಶರೇ ಮೊದಲಿಗರಾಗಿದ್ದು, ಅವರೇ ನ್ಯಾಯಾಲಯ ವಿವಿಧ ಪೀಠಗಳಿಗೆ ಪ್ರಕರಣಗಳನ್ನು ಹಂಚಿಕೆ ಮಾಡುವ ವಿಶೇಷ ಅಧಿಕಾರ ಹೊಂದಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ನ್ಯಾಯಾಧೀಶರುಗಳಾದ ಎ ಕೆ ಸಿಕ್ರಿ ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ ನ್ಯಾಯಪೀಠ ಇಂದು ಪ್ರತ್ಯೇಕ ತೀರ್ಪು ನೀಡಿ, ಸಮಾನ ನ್ಯಾಯಮೂರ್ತಿಗಳಲ್ಲಿ ಮುಖ್ಯ ನ್ಯಾಯಾಧೀಶರು ಮೊದಲ ಸ್ಥಾನ ಹೊಂದಿರುತ್ತಾರೆ. ಹೀಗಾಗಿ ಅವರು ಕೋರ್ಟಿನ ಆಡಳಿತಗಳಲ್ಲಿ ನಾಯಕತ್ವ ವಹಿಸುವ ಅಧಿಕಾರ ಹೊಂದಿರುತ್ತಾರೆ, ಅವುಗಳಲ್ಲಿ ಕೇಸುಗಳ ವಿಚಾರಣೆಯನ್ನು ನಿಯೋಜನೆ ಮಾಡುವುದು ಕೂಡ ಸೇರಿರುತ್ತದೆ ಎಂದು ಹೇಳಿದೆ.

ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ ಅವರು, ಸುಪ್ರೀಂ ಕೋರ್ಟ್ ನಲ್ಲಿ ಈಗಿರುವ ಮುಖ್ಯ ನ್ಯಾಯಾಧೀಶರು ಪ್ರಕರಣದ ವಿಚಾರಣೆ ಹಂಚಿಕೆ ಮಾಡುವ ವಿಧಾನವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಯ ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ.

ಐವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ ಹಾಗೂ ಮೂವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ ಈಗಾಗಲೇ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರೇ ಎಲ್ಲ ನ್ಯಾಯಾಧೀಶರುಗಳಿಗಿಂತ ಮೇಲು ಎಂದು ತೀರ್ಪು ನೀಡಿತ್ತು.

ಇಂದು ತೀರ್ಪು ನೀಡಿದ ನ್ಯಾಯಮೂರ್ತಿ ಸಿಕ್ರಿ, ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರ ಅಧಿಕಾರದ ವಿಚಾರದಲ್ಲಿ ವಿವಾದ ಉಂಟಾಗುವ ಸಂದರ್ಭವಾಗಲೇ ಪ್ರಶ್ನೆಯಾಗಲಿ ಬರುವುದೇ ಇಲ್ಲ, ಅವರೇ ಪ್ರಮುಖರಾಗಿರುತ್ತಾರೆ. ಅವರೇ ಸುಪ್ರೀಂ ಕೋರ್ಟ್ ನ ವಿವಿಧ ಪೀಠಗಳಿಗೆ ಕೇಸುಗಳ ಹಂಚಿಕೆ ಮಾಡುವ ಅಧಿಕಾರ ಹೊಂದಿರುತ್ತಾರೆ ಎಂದು ಹೇಳಿದರು. ಇವರ ತೀರ್ಪಿಗೆ ದನಿಗೂಡಿಸಿದ ನ್ಯಾಯಮೂರ್ತಿ ಭೂಷಣ್ ಮುಖ್ಯ ನ್ಯಾಯಮೂರ್ತಿಗಳು ಕೇಸಿನ ವಿಚಾರಣೆಯನ್ನು ಹಂಚಿಕೆ ಮಾಡುವ ಅಧಿಕಾರ ಹೊಂದಿದ್ದು ವಿಚಾರಣೆ ನಡೆಸಲು ನ್ಯಾಯಪೀಠವನ್ನು ನೇಮಿಸುವ ಅಧಿಕಾರವನ್ನು ಕೂಡ ಹೊಂದಿರುತ್ತಾರೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್ ನಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಈ ಸಂಪ್ರದಾಯವನ್ನು ಯಾರೂ ಪ್ರಶ್ನೆ ಮಾಡುವ ಹಾಗಿಲ್ಲ ಎಂಬ ಎಚ್ಚರಿಕೆಯನ್ನು ಸಹ ನೀಡಿದರು. ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮಧ್ಯೆ ತಕರಾರು ಮತ್ತು ಭಿನ್ನಾಭಿಪ್ರಾಯ ಉಂಟಾದರೆ ಅದು ದೇಶದ ಜನತೆಯಲ್ಲಿ ತಪ್ಪು ಸಂದೇಶ ಉಂಟುಮಾಡುತ್ತದೆ. ಇದು ನ್ಯಾಯಾಂಗ ವ್ಯವಸ್ಥೆಗೆ ಧಕ್ಕೆ ಉಂಟುಮಾಡುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

SCROLL FOR NEXT