ರಾಂಚಿ: ರಾಮಘರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಮೇರೆಗೆ ಬಿಡುಗಡೆಗೊಂಡಿರುವ ಆರೋಪಿಗಳೊಂದಿಗೆ ಕೇಂದ್ರ ಸಚಿವ ಜಯಂತ್ ಸಿನ್ಹಾ ಇರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ತೀವ್ರ ಆಕ್ರೋಶಗಳು ವ್ಯಕ್ತವಾಗತೊಡಗಿವೆ.
ಜಾರ್ಖಾಂಡ್'ನ ರಾಮಘರ್'ನಲ್ಲಿ ಮಾರ್ಚ್ 2018ರಲ್ಲಿ ಹತ್ಯೆಯೊಂದು ನಡೆದಿತ್ತು. ಪ್ರಕರಣ ಸಂಬಂಧ 11 ಮಂದಿ ಆರೋಪಿಗಳನ್ನು ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಪು ನೀಡಿ ಜೀವಾವಧಿ ಶಿಕ್ಷೆಯನ್ನೂ ನೀಡಿತ್ತು. ಆದರೆ, ಕಳೆದವಾರ ಹೈ ಕೋರ್ಟ್ ಜೀವಾವಧಿ ಶಿಕ್ಷೆಯನ್ನು ರದ್ದುಪಡಿಸಿ, 8 ಮಂದಿಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು.
ಬಿಡುಗಡೆಗೊಂಡ ಆರೋಪಿಗಳೊಂದಿಗೆ ಜಯಂತ್ ಸಿನ್ಹಾ ಅವರು ತೆಗೆಸಿಕೊಂಡಿರುವ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಫೋಟೋ ವೈರಲ್ ಆಗಿದೆ.
ಈ ಹಿಂದೆ ಕೂಡ ಸಿನ್ಹಾ ಅವರು ಆರೋಪಿಗಳ ಪರ ಅತ್ಯುತ್ತಮ ವಕೀಲರನ್ನು ನೇಮಿಸಿ ಕಾನೂನೂ ಹೋರಾಟ ಮಾಡಲಾಗುತ್ತದೆ ಎಂದು ಹೇಳಿದ್ದರು.
ಆರೋಪಿಗಳೊಂದಿಗೆ ಕೇಂದ್ರ ಸಚಿವರಿರುವ ಫೋಟೋಗೆ ಜೆಎಂಎಂ ಕಾರ್ಯಕಾರಿ ಅಧ್ಯಕ್ಷ ಹೆಮಂತ್ ಸೊರೆನ್ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಕೇಂದ್ರ ಸಚಿವರೊಬ್ಬರು ಆರೋಪಿಗಳ ಜೊತೆಗೆ ನಿಂತಿರುವುದು ಅವಮಾನಕರ ವಿಚಾರ ಎಂದು ಜಾರ್ಖಾಂಡ್'ನ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸುಖ್ದಿಯೋ ಭಗತ್ ಅವರು ಹೇಳಿದ್ದಾರೆ.
ಕೇಂದ್ರ ಸಚಿವ ಈ ವರ್ತನೆಗೆ ಪ್ರತೀಯೊಬ್ಬರು ಖಂಡಿಸಲೇಬೇಕು. ಘಟನೆಗೆ ಕೋಮು ಬಣ್ಣ ನೀಡುವ ಯತ್ನಗಳು ನಡೆದಿದೆ ಎಂದು ಭಗತ್ ಅವರು ತಿಳಿಸಿದ್ದಾರೆ.