ಮುಂಬೈ: ವಾಣಿಜ್ಯ ರಾಜಧಾನಿ ಮುಂಬೈ ಭಾರೀ ಮಳೆಯಿಂದ ತತ್ತರಿಸಿದೆ. ರಸ್ತೆಗಳು ಜಲಾವೃತಗೊಂಡಿದ್ದು, ರೈಲ್ವೆ ಹಳಿಯಲ್ಲಿ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಇತ್ತೀಚಿನ ದಿನಗಳಲ್ಲೇ ಭಾರೀ ಮಳೆಯಾಗಿದ್ದು, ರಸ್ತೆಗಳು, ಹಾಗೂ ಪ್ರಮುಖ ವೃತ್ತಗಳು ಜಲಾವೃತಗೊಂಡು, ಜನರು ಸೊಂಟದವರೆಗೂ ನಿಂತ ನೀರಿನಲ್ಲಿಯೇ ನಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿದೆ.
ಮಳೆ ಹಾಗೂ ಮಬ್ಬು ಬೆಳಕಿನ ಕಾರಣದಿಂದಾಗಿ ವಾಹನಗಳು ತೆವಳುತ್ತಾ ಸಾಗುವಂತಾಗಿದ್ದು, ಇಂದು ಅನೇಕ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಅನೇಕ ಸರ್ಕಾರಿ ಇಲಾಖೆಗಳ ನೌಕರರು ಮನೆಯಲ್ಲಿಯೇ ಉಳಿಯುವಂತಾಯಿತು.
ಕೆಲವು ಕಡೆಗಳಲ್ಲಿ ರೈಲ್ವೆ ಹಳಿ ಮೇಲೆ ನೀರು ನಿಂತಿದ್ದರಿಂದ ಉಪನಗರ ರೈಲುಸಂಚಾರದಲ್ಲಿ ಐದರಿಂದ ಹದಿನೈದು ನಿಮಿಷ ವ್ಯತ್ಯಯ ಕಂಡುಬಂದಿತು.
ನೈರುತ್ಯ ರೈಲ್ವೆ ಅಧಿಕಾರಿಗಳ ಪ್ರಕಾರ, ಕೆಲವು ಕಡೆ ಹಳಿಗಳು ನೀರಿನಿಂದ ಆವೃತ್ತವಾಗಿದ್ದರಿಂದ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಕೆಲವು ಕಡೆಗಳಲ್ಲಿ ಮಿತ ವೇಗದಲ್ಲಿ ರೈಲು ಸಂಚಾರವನ್ನು ಮುಂದುವರೆಸಲಾಯಿತು.
ಮುಂಬೈನ ಕೇಂದ್ರ ಪ್ರದೇಶಗಳಾದ ಕುರ್ಲಾ, ಸಿಯಾನ್, ಮತ್ತು ದಾದರ್ ಮತ್ತಿತರ ಕಡೆಗಳಲ್ಲಿಯೂ ಭಾರೀ ಮಳೆಯಾಗಿದೆ. ವರ್ಷಧಾರೆಯಿಂದಾಗಿ ಪಲ್ಗರ್ ಜಿಲ್ಲೆಯ ಮಿರಾ ರಸ್ತೆ, ನಲಸೊಪಾರ, ಮತ್ತು ವಾಸೈ ಕಡೆಗಳಲ್ಲಿ ಭಾರೀ ಪರಿಣಾಮ ಉಂಟಾಗಿದೆ. ರೈಲುಗಳು ನಿಧಾನಗತಿಯಲ್ಲಿ ಚಲಿಸುತ್ತಿವೆ. ಆದರೆ, ಸೇವೆಯನ್ನು ರದ್ದುಗೊಳಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೃಹತ್ ಮುಂಬೈ ವಿದ್ಯುತ್ ಪೂರೈಕೆ ಮತ್ತು ಸಾರಿಗೆ ಸಂಸ್ಥೆ ಬಸ್ ಗಳ ಸಂಚಾರದಲ್ಲಿ ವ್ಯತ್ಯಯಗೊಂಡಿದೆ. ಆದರೆ. ಆದರೆ ಸೇವೆಯನ್ನು ರದ್ದುಗೊಳಿಸಿಲ್ಲ ಎಂದು ಬಿಇಎಸ್ ಟಿ ವಕ್ತಾರರು ಹೇಳಿದ್ದಾರೆ.
ಮುಂಬೈ ವಿಮಾನ ನಿಲ್ದಾಣದಲ್ಲೂ ಸರಿಯಾಗಿ ಕಾಣುತ್ತಿಲ್ಲ. ಆದರೂ, ವಿಮಾನಗಳು ಎಂದಿನಂತೆ ಕಾರ್ಯಾಚರಣೆ ನಡೆಸುತ್ತಿವೆ. ನಾಳೆಯವರೆಗೂ ಮುಂಬೈಯಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಮುಂಬೈಯಲ್ಲಿ ದಾಖಲೆಯ 170.6 ಮಿಲಿ ಮೀಟರ್ ಮಳೆಯಾಗಿದೆ. ಇದು ಈ ಆವೃತ್ತಿಯ ಹೆಚ್ಚಿನ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಉಪ ನಿರ್ದೇಶಕ ಜನರಲ್ ಕೆ. ಎಸ್. ಹೊಸಲಿಕರ್ ಹೇಳಿದ್ದಾರೆ.
ಭಾರೀ ಮಳೆಯಿಂದ ಠಾಣೆ ರೈಲ್ವೆ ನಿಲ್ದಾಣ ನೀರಿನಿಂದ ಜಲಾವೃತಗೊಂಡಿತು. ಮಳೆಯಿಂದಾಗಿ ಎಲ್ಲಾ ಕೆರೆಗಳಿಗೂ ಉತ್ತಮ ನೀರು ಬಂದಿದ್ದು, 18 ಮಿಲಿಯನ್ ಜನರಿಗೆ ಕುಡಿಯುವ ನೀರು ಪೂರೈಸಬಹುದಾಗಿದೆ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆ ಹೇಳಿದೆ.
ಕಳೆದ 72 ಗಂಟೆಗಳ ಅವಧಿಯಲ್ಲಿ ಮುಂಬೈ ಮಳೆ ಸಂಬಂಧಿತ ಅನಾಹುತಗಳಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. ಭಾರಿ ಮಳೆಯ ನಂತರ ಅನೇಕ ದೊಡ್ಡ, ಸಣ್ಣ, ಕೆರೆಗಳು ತುಂಬಿದ್ದು, ಸಂಜಯ್ ಗಾಂಧಿ ರಾಷ್ಟ್ರೀಯ ಪಾರ್ಕ್, ಕರ್ನಾಳ ಪಕ್ಷಿಧಾಮ, ಮತ್ತಿತರ ಪ್ರವಾಸೋದ್ಯಮ ಸ್ಥಳಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.ರತ್ನಗಿರಿ ಜಿಲ್ಲೆಯಲ್ಲಿ ನೀರಿನಲ್ಲಿ ಸಿಲುಕಿದ್ದ 12 ಪ್ರವಾಸಿಗರನ್ನು ರಕ್ಷಣಾ ತಂಡಗಳು ರಕ್ಷಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos