ಕೋರ್ಟ್ ಆದೇಶದಲ್ಲಿ ನಿಮಗೆ ಬೇಕಾದ ಅಂಶಗಳನ್ನು ಮಾತ್ರ ಪರಿಗಣಿಸಲು ಹೇಗೆ ಸಾಧ್ಯ: ಲೆ.ಗೌರ್ನರ್ ಗೆ ಕೇಜ್ರಿ ಪ್ರಶ್ನೆ
ನವದೆಹಲಿ: ದೆಹಲಿ ಸರ್ಕಾರದ ಅಧಿಕಾರದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರವೂ ದೆಹಲಿ ಸಿಎಂ- ಲೆಫ್ಟಿನೆಂಟ್ ಗೌರ್ನರ್ ನಡುವಿನ ಗುದ್ದಾ ಮುಂದುವರೆದಿದೆ.
ಸುಪ್ರೀಂ ಕೋರ್ಟ್ ನ ಆದೇಶದ ಬೆನ್ನಲ್ಲೇ ಲೆಫ್ಟಿನೆಂಟ್ ಗೌರ್ನರ್ ನ ಆಕ್ಷೇಪದ ಹೊರತಾಗಿಯೂ ದೆಹಲಿ ಸರ್ಕಾರ ಜಾರಿಗೆ ತಂದಿದ್ದ ಮುಖ್ಯಮಂತ್ರಿ ತೀರ್ಥ್ ಯಾತ್ರಾ ಯೋಜನೆಯನ್ನು ಜಾರಿಗೆ ತಂದಿದ್ದ ಕೇಜ್ರಿವಾಲ್ ಎಲ್ಲಾ ಆಕ್ಷೇಪಣೆಗಳನ್ನೂ ಮೀರಿ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಈ ನಂತರ ದೆಹಲಿ ಲೆಫ್ಟಿನೆಂಟ್ ಗೌರ್ನರ್ ಗೆ ಪತ್ರ ಬರೆದಿದ್ದು, ಕೇಂದ್ರ-ದೆಹಲಿ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ ಆದೇಶದಲ್ಲಿ ನಿಮಗೆ ಬೇಕಾದ ಅಂಶಗಳನ್ನು ಮಾತ್ರ ಯಾಕೆ ಪರಿಗಣಿಸುತ್ತೀರಿ? ಎಂದು ಪ್ರಶ್ನಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ನಂತರವೂ ದೆಹಲಿ ಸರ್ಕಾರಕ್ಕೆ ಸಂಬಂಧಿಸಿದಂತೆ ಲೆಫ್ಟಿನೆಂಟ್ ಗೌರ್ನರ್ ಕೇಂದ್ರ ಗೃಹ ಇಲಾಖೆಯಿಂದ ಅಭಿಪ್ರಾಯ ಕೇಳಿದ್ದರು. ಈ ಬಗ್ಗೆಯೂ ಉಲ್ಲೇಖಿಸಿರುವ ಕೇಜ್ರಿವಾಲ್, ಸುಪ್ರೀಂ ಆದೇಶವನ್ನು ವ್ಯಾಖ್ಯಾನಿಸುವ ಅಧಿಕಾರ ಗೃಹ ಇಲಾಖೆಗೆ ಇಲ್ಲ ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಗೊಂದಲಗಳಿದ್ದರೆ, ಸುಪ್ರೀಂ ಕೋರ್ಟ್ ನ್ನು ಕೂಡಲೇ ಸಂಪರ್ಕಿಸಿ, ಆದರೆ ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಬೇಡಿ ಎಂದು ಲೆಫ್ಟಿನೆಂಟ್ ಗೌರ್ನರ್ ಗೆ ಬರೆದಿರುವ ಪತ್ರದಲ್ಲಿ ಕೇಜ್ರಿವಾಲ್ ತಿಳಿಸಿದ್ದಾರೆ. ಜಾರಿಗೊಳಿಸುವುದಿದ್ದರೆ ಸುಪ್ರೀಂ ಕೋರ್ಟ್ ನ ಆದೇಶವನ್ನು ಯಥಾವತ್ ಜಾರಿಗೊಳಿಸಿ, ಇಲ್ಲವಾದರೆ ಸಂಪೂರ್ಣ ಆದೇಶವನ್ನು ಜಾರಿಗೊಳಿಸಬೇಡಿ, ಆದರೆ ನಿಮಗೆ ಬೇಕಾದ ಅಂಶಗಳನ್ನು ಮಾತ್ರ ಜಾರಿಗೊಳಿಸಲು ಹೇಗೆ ಸಾಧ್ಯ ಎಂದು ಕೇಜ್ರಿವಾಲ್ ಪತ್ರದಲ್ಲಿ ಕೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos