ಪಾಟ್ನಾ: ಬಿಹಾರದ ಬಿಜೆಪಿ ಮತ್ತು ಜೆಡಿಯು ಮೈತ್ರಿ ಕುರಿತು ಶಂಕೆ ಮೂಡುತ್ತಿದ್ದು, ಕೋಮುಗಲಭೆ ಆರೋಪಿಗಳ ಭೇಟಿ ಮಾಡಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿರುದ್ಧ ಬಿಹಾರ ಸಿಎಂ ನಿತೀಶ್ ಕುಮಾರ್ ಕಿಡಿಕಾರಿದ್ದಾರೆ.
ಸಂಘಪರಿವಾರದ ಕುಟುಂಬಸ್ಥರನ್ನು ಗಿರಿರಾಜ್ ಸಿಂಗ್ ಅವರು ಭೇಟಿ ಮಾಡಿ ಚರ್ಚಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಿಎಂ ನಿತೀಶ್ ಕುಮಾರ್, ಇಂತಹ ಯಾವುದೇ ನಡೆ ಸಹಿಸಲಸಾಧ್ಯ ಎಂದು ಹೇಳಿದ್ದಾರೆ. ಅಂತೆಯೇ ಗಿರಿರಾಜ್ ಸಿಂಗ್ ಅವರ ನಡೆಯನ್ನು ಮೀಡಿಯಾ ಸ್ಟಂಟ್ ಎಂದು ಕಿಡಿಕಾರಿದ್ದಾರೆ.
ಕೋಮು ಗಲಭೆಗೆ ಸಂಬಂಧಿಸಿದಂತೆ ಸಂಘಪರಿವಾರದ ಕೆಲ ಮುಖಂಡರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅವರ ವಿರುದ್ಧ ಪ್ರಬಲ ಸಾಕ್ಷ್ಯಾಧಾರಗಳು ಕೂಡ ದೊರೆತಿದ್ದು, ಈ ಬಗ್ಗೆ ಯಾರಿಗಾದರೂ ಸಂಶಯವಿದ್ದರೆ ಕೋರ್ಟ್ ಗೆ ಹೋಗಬಹುದು. ಇಂತಹ ಆರೋಪಿಗಳನ್ನು ಗಿರಿರಾಜ್ ಸಿಂಗ್ ಭೇಟಿ ಮಾಡಿದ್ದು ಸರಿಯಲ್ಲ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಸಾರ್ವಜನಿಕ ಸಹಾನುಭೂತಿಗಾಗಿ ಆರೋಪಿಗಳ ಬೆನ್ನಿಗೆ ನಿಲ್ಲುವುದು ಸರಿಯಲ್ಲ. ಇದು ಕೇವಲ ಪ್ರಚಾರ ತಂತ್ರ. ಇಂತಹ ಕೃತ್ಯಗಳು ಸಮಾಜದಲ್ಲಿ ಅನಾರೋಗ್ಯಕರ ಪರಿಸ್ಥಿತಿ ನಿರ್ಮಾಣ ಮಾಡುತ್ತದೆ. ಕೋಮುಗಲಭೆಗೆ ಪ್ರಚೋದನೆ ನೀಡಿದಂತಾಗುತ್ತದೆ. ಯಾವುದೇ ಕಾರಣಕ್ಕೂ ಸರ್ಕಾರದ ಕೋಮುಗಲಭೆಗೆ ಅವಕಾಶ ನೀಡುವ ಮತ್ತು ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಬೆಳವಣಿಗೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಇನ್ನು ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಹೇಳಿಕೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಚೌದರಿ ಅವರು, ಗಿರಿರಾಜ್ ಸಿಂಗ್ ಅವರು ಯಾವುದೇ ರೀತಿಯ ತಪ್ಪು ಮಾಡಿಲ್ಲ. ಅವರ ಕುಟುಂಬಸ್ಥರು ಜೈಲಿನಲ್ಲಿದ್ದು, ಅವರ ಕ್ಷೇತ್ರದ ಮುಖಂಡರು ಅವರನ್ನು ಭೇಟಿ ಮಾಡಿದ್ದಾರೆ ಅಷ್ಟೇ. ಇದಕ್ಕೆ ರಾಜಕೀಯ ಬಣ್ಣ ಬಳಿಯುವ ಅವಶ್ಯಕತೆ ಇಲ್ಲ. ಗಿರಿರಾಜ್ ಸಿಂಗ್ ತಮ್ಮ ಕ್ಷೇತ್ರ ಜನರನ್ನು ಮಾತ್ರ ಬೇಟಿಯಾಗಿದ್ದಾರೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos