ನವದೆಹಲಿ: ಶಾಲೆಯ ಶುಲ್ಕವನ್ನು ಬಾಕಿ ಉಳಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಸುಮಾರು 16 ನರ್ಸರಿ ಬಾಲಕಿಯರನ್ನು ಬೇಸ್ ಮೆಂಟ್ ನಲ್ಲಿ ಲಾಕ್ ಮಾಡಿದ್ದ ದೆಹಲಿಯ ಪ್ರತಿಷ್ಠಿತ ಶಾಲೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರು ಗುರುವಾರ ಭೇಟಿ ನೀಡಿದ್ದಾರೆ.
ಶಾಲೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದೆಹಲಿ ಸಿಎಂ, ರೆಬಿಯಾ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲೆ ನಹೀದ್ ಉಸ್ಮಾನಿ ಅವರೊಂದಿಗೆ ಮಾತನಾಡಿದ್ದೇವೆ ಮತ್ತು ಮಕ್ಕಳನ್ನು ಈ ರೀತಿ ಕೆಟ್ಟದಾಗಿ ನಡೆಸಿಕೊಂಡರೆ ಸಹಿಸಿಕೊಳ್ಳುವುದಿಲ್ಲ. ದೆಹಲಿ ಸರ್ಕಾರ ಮತ್ತು ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಎಚ್ಚರಿಸಿರುವುದಾಗಿ ತಿಳಿಸಿದರು.
ಮಕ್ಕಳನ್ನು ಲಾಕ್ ಮಾಡಿದ ಘಟನೆ ಬಗ್ಗೆ ತನಿಖೆ ನಡೆಸಲಾಗುವುದು ದೆಹಲಿ ಸಿಎಂ ಹೇಳಿದ್ದಾರೆ.
ರೆಬಿಯಾ ಗರ್ಲ್ಸ್ ಪಬ್ಲಿಕ್ ಸ್ಕೂಲ್ ನಲ್ಲಿ ಶುಲ್ಕ ಪಾವತಿಸದಿದ್ದಕ್ಕೆ 16 ವಿದ್ಯಾರ್ಥಿಗಳನ್ನು ಕೂಡಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ನೀಡುವಂತೆ ನಿನ್ನೆ ಅರವಿಂದ್ ಕೇಜ್ರಿವಾಲ್ ಅವರು ಶಿಕ್ಷಣ ಇಲಾಖೆಗೆ ಸೂಚಿಸಿದ್ದರು.