ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ದೇವಸ್ಥಾನದ ಯಾಗಶಾಲೆಯಲ್ಲಿ ಜೀವಂತ ಸುಟ್ಟರು!
ಬರೇಲಿ (ಉತ್ತರ ಪ್ರದೇಶ): ಮಹಿಳೆಯೊಬ್ಬಳನ್ನು ಸಾಮೂಹಿಕ ಅತ್ಯಾಚಾರ ಕ್ಕೆ ಒಳಪಡಿಸಿ ಬಳಿಕ ದೇವಸ್ಥಾನದ ಹೋಮದ ಕುಂಡದಲ್ಲಿ ಜೀವಂತವಾಗಿ ಸುಟ್ಟ ಘೋರ ಘಟನೆ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ನಡೆದಿದೆ.
35 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರಗೈದ ಐವರು ಕಾಮುಕರು ಅವಳನ್ನು ದೇವಸ್ಥಾನದ ಯಜ್ಞಶಾಲೆಯಲ್ಲಿ ಜೀವಂತ ದಹನ ಮಾಡಿದ್ದಾರೆ. ಸಂತ್ರಸ್ತೆ ತಾನು ಸಾಯುವ ಮುನ್ನ ಪೋಲೀಸ್ ಸಹಾಯವಾಣಿಗೆ ಸಹ ಕರೆ ಮಾಡಿದ್ದಳು. ಆದರೂ ಯಾವ ಪ್ರಯೋಜನವಾಗಿರಲಿಲ್ಲ ಎಂದು ತಿಳಿದುಬಂದಿದೆ.
ಮೃತ ಮಹಿಳೆಗೆ ಇಬ್ಬರು ಮಕ್ಕಳಿದ್ದು, ಆಕೆಯ ಪತಿ ಘಾಜಿಯಾಬಾದ್ನಲ್ಲಿ ಕೂಲಿ ಕಾರ್ಮಿಕರಾಗಿದ್ದಾರೆ ಮನೆ ಸಮೀಪದ ದೇವಸ್ಥಾನದಲ್ಲಿಯೇ ಈ ಘಟನೆ ನಡೆದಿದ್ದು ಘಟನೆಯಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.
ಅರಮ್ ಸಿಂಗ್, ಮಹಾವೀರ್, ಚರಣ್ ಸಿಂಗ್, ಗುಲ್ಲು ಮತ್ತು ಕುಮಾರ್ ಪಾಲ್ ಇವರುಗಳನ್ನು ಆರೋಪಿಗಳೆಂದು ಗುರುತಿಸಲಾಗಿದ್ದು ಎಲ್ಲರೂ ಅದೇ ಗ್ರಾಮದ ನಿವಾಸಿಗಳಾಗಿದ್ದರು.
ರಾಜ್ಪುರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ ತನ್ನ ಪತ್ನಿ ಪೋಲೀಸರಿಗೆ ಕರೆ ಮಾಡಿದ್ದರೂ ಪೋಲೀಸರು ಸರಿಯಾದ ಸಮಯಕ್ಕೆ ಬಂದು ರಕ್ಷಣೆ ಒದಗಿಸಿಲ್ಲ ಎಂದು ಅತ್ಯಾಚಾರಕ್ಕೊಳಗಾಗಿ ಸತ್ತ ಮಹಿಳೆಯ ಪತಿ ದೂರಿದ್ದಾರೆ.
ಶನಿವಾರ ನಸುಕಿನ ಜಾವ 2.30ರ ಸುಮಾರಿಗೆ ಈ ಕೃತ್ಯ ನಡೆದಿದ್ದು ಮನೆಗೆ ನುಗ್ಗಿದ ದುಷ್ಕರ್ಮಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಆ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಹೊರಗೆ ಭಾರೀ ಮಳೆ ಸುರಿಯುತ್ತಿತ್ತು. ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ಆರೋಪಿಗಳು ಅತ್ಯಾಚಾರ ನಡೆಸಿದ ಬಳಿಕ ಅಲ್ಲಿಂದ ಪರಾರಿಯಾಗಿದ್ದರು. ಮಹಿಳೆ ಈ ಸಂಬಂಧ ತನ್ನ ಪತಿಗೆ ಕರೆ ಮಾಡಿದ್ದಾಳೆ ಆದರೆ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಬಳಿಕ ಆಕೆ ಸಂಬಂಧಿಕರೊಬ್ಬರಿಗೆ ಕರೆ ಮಾಡಿ ಎಲ್ಲವನ್ನೂ ವಿವರಿಸಿದ್ದಳು.
ಇಷ್ಟರಲ್ಲಿ ಆರೋಪಿಗಳು ಮತ್ತೆ ಬಂದಿದ್ದಾರೆ. ಮಹಿಳೆಯನ್ನು ದೇವಸ್ಥಾನಕ್ಕೆ ಎಳೆದೊಯ್ದು ಯಾಗಶಾಲೆಯಲ್ಲಿದ್ದ ಹೋಮದ ಕುಂಡದಲ್ಲಿ ಜೀವಂತವಾಗಿ ಸುಟ್ಟು ಹಾಕಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos