ಗುವಾಹಟಿ: ಹಣಕ್ಕಾಗಿ ಕೆಲಸ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಪಿಆರ್ ಶರ್ಮಾ ಪುತ್ರಿ ಸೇರಿದಂತೆ ಅಸ್ಸಾಂ ಸರ್ಕಾರದ 19 ಅಧಿಕಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ.
2016ರಲ್ಲಿ ನಡೆದಿದ್ದ ಅಸ್ಸಾಂ ಸಾರ್ವಜನಿಕ ಸೇವಾ ಆಯೋಗ(ಎಪಿಎಸ್ಸಿ) ಪರೀಕ್ಷೆಯಲ್ಲಿ ಬಂಧಿತ ಅಧಿಕಾರಗಳ ಕೈಬರಹ ಹೊಂದಾಣಿಕೆ ಆಗದ ಕಾರಣ 19 ಅಧಿಕಾರಿಗಳನ್ನು ಪೊಲೀಸರು ಗುವಾಹಟಿಯಲ್ಲಿ ಬಂಧಿಸಿದ್ದಾರೆ.
ಎಪಿಎಸ್ಸಿ ಹಣಕ್ಕಾಗಿ ಕೆಲಸ ಹಗರಣಕ್ಕೆ ಸಂಬಂಧಿಸಿದಂತೆ ಡಿಬ್ರೂಗರ್ ಪೊಲೀಸರು ತನಿಖೆ ನಡೆಸುತ್ತಿದ್ದು ಈ ಸಂಬಂಧ ಅಸ್ಸಾಂ ಸಾರ್ವಜನಿಕ ಸೇವಾ(ಎಸಿಎಸ್), ಅಸ್ಸಾಂ ಪೊಲೀಸ್ ಸರ್ವಿಸ್(ಎಪಿಎಸ್)ನ 2016ರ ಬ್ಯಾಚ್ ನ 19 ಅಧಿಕಾರಿಗಳ ಕೈಬರಹವನ್ನು ಪರೀಕ್ಷಿಸಿದ್ದು ಇದು ಉತ್ತರ ಪತ್ರಿಕೆಯಲ್ಲಿನ ಕೈಬರಹಕ್ಕೂ ಹೊಂದಾಣಿಕೆ ಆಗದ ಹಿನ್ನೆಲೆಯಲ್ಲಿ 19 ಅಧಿಕಾರಿಗಳಿಗೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದರು.
ಎಪಿಎಸ್ಸಿ ಮುಖ್ಯಸ್ಥರಾಗಿದ್ದ ರಾಕೇಶ್ ಪೌಲ್ ಎಂಬುವರು 2013ರಲ್ಲಿ ಪರೀಕ್ಷೆ ನಡೆಸಿದ್ದು ಈ ಪರೀಕ್ಷೆಯಲ್ಲಿ 19 ಅಧಿಕಾರಿಗಳು ಕೆಲಸ ಪಡೆದುಕೊಂಡಿದ್ದರು. ಈ ಪರೀಕ್ಷೆಯಲ್ಲಿ ಗೋಲ್ ಮಾಲ್ ನಡೆದಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ 2016ರಲ್ಲಿ ರಾಕೇಶ್ ಪೌಲ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ನಂತರ ಹಗರಣ ಬಯಲಿಗೆ ಬಂದಿತ್ತು.