ದೇಶ

ಮೋದಿ ಸರ್ಕಾರದ ರೈತ ಯೋಜನೆಗಳನ್ನು ಗುಣಗಾನ ಮಾಡಿದ ಅಮಿತ್ ಶಾ

Nagaraja AB

ನವದೆಹಲಿ: ಕೃಷಿ ಬಿಕ್ಕಟ್ಟಿನಿಂದ ರೈತರನ್ನು ಪಾರು ಮಾಡಿ ಅವರ ಜೀವನಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರಸರ್ಕಾರ  ಹಲವು ಕ್ರಮಗಳನ್ನು ಕೈಗೊಂಡಿರುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ಭಾರತ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಕೃಷಿಕರ ಆರ್ಥಿಕ ಸುಧಾರಣೆ , ವಿಮೆಯ ಪಾತ್ರ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,  ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆ ಅನುಷ್ಠಾನದಿಂದ ದೇಶದ ಹಲವು ಮಂದಿ ರೈತರು  ತಮ್ಮ ಭೂಮಿಯಲ್ಲಿ ನೀರಾವರಿ ಸೌಲಭ್ಯ ಹೊಂದುವಂತಾಗಿದೆ. ಸಂಪನ್ಮೂಲ ಸೃಷ್ಟಿ. ನಿರ್ವಹಣೆ, ವಿಸ್ತರಣೆ  ಚಟುವಟಿಕೆಗಳೊಂದಿಗೆ ಸಮಸ್ಯೆಗಳಿಂದ ಮುಕ್ತಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

 ಈ ಹಿಂದೆ ಕೃಷಿ ಭೂಮಿ ಹೊಂದಿರುವ  ಮೂರರಲ್ಲಿ ಒಬ್ಬರು ಮಾತ್ರ   ಬೆಳೆಗಾಗಿ ನೀರು ಬಳಸುತ್ತಿದ್ದರು. ಆದರೆ. ಈ ಯೋಜನೆ ಅನುಷ್ಠಾನದ ನಂತರ ಗುಜರಾತ್ , ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ  ಬೆಳೆ ಬೆಳೆಯುವ ರೈತರ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದರು.

ಇತ್ತೀಚಿನ ವರದಿಗಳ ಪ್ರಕಾರ  ಬರಡು ಭೂಮಿ ಹೊಂದಿಲ್ಲದ ರಾಜ್ಯಗಳಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದೆ. ಇದೊಂದು ಮಾತ್ರವಲ್ಲ, ಈ ಯೋಜನೆಯಿಂದ ರೈತರು ಕೃಷಿ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಅಲ್ಲದೇ ಭೂಮಿ ಪ್ರಯೋಗಾಲಯದಂತಹ ಕಲ್ಪನೆಗಳು ಮೂಡಿವೆ ಎಂದು ತಿಳಿಸಿದರು.

ಪ್ರಧಾನಮಂತ್ರಿ ಫಸಲ್ ಭೀಮಾ  ಯೋಜನೆಯಿಂದ ದೇಶಾದ್ಯಂತ ರೈತರು ಬೆಳೆಗಳಿಗೆ ವಿಮೆ ಪಡೆಯುವಂತಾಗಿದೆ. ಬ್ಯಾಂಕುಗಳಿಂದ  ಸಾಲ ಪಡೆಯುವಂತಾಗಿದ್ದು, ಪ್ರವಾಹದಂತಹ ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ರೈತರಿಗೆ ನೆರವು ಲಭಿಸುವಂತಾಗಿದೆ ಎಂದು ಹೇಳಿದರು.

2014 ರಿಂದಲೂ ನೀಲಿ, ಹಸಿರು ಕ್ರಾಂತಿಯಂತಹ  ಕಾರ್ಯಕ್ರಮಗಳನ್ನು  ಕೇಂದ್ರಸರ್ಕಾರ ಜಾರಿಗೊಳಿಸಿದ್ದು,2022 ರೊಳಗೆ  ರೈತರ ಆದಾಯ ದುಪ್ಪಟ್ಟುಗೊಳಿಸುವ ನಿಟ್ಟಿನಲ್ಲಿ  ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿರುವುದಾಗಿ  ಅಮಿತ್ ಶಾ ಹೇಳಿದರು.

SCROLL FOR NEXT