ನವದೆಹಲಿ: ಮಾನವ ಕಳ್ಳಸಾದನೆ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿರುವ ದೆಹಲಿ ಮಹಿಳಾ ಆಯೋಗ 16 ಯುವತಿಯರನ್ನು ಮುನಿರ್ಕಾರ ಎಂಬ ಪ್ರದೇಶದಲ್ಲಿ ರಕ್ಷಣೆ ಮಾಡಿದೆ ಎಂದು ಬುಧವಾರ ತಿಳಿದುಬಂದಿದೆ.
ಯುವತಿಯನ್ನು ಇರಾನ್ ಮತ್ತು ಕುವೈತ್'ಗೆ ಇಂದು ಬೆಳಿಕ್ಕೆ ಸಾಗಣೆ ಮಾಡಲಾಗುತ್ತಿತ್ತು ಎಂದು ದೆಹಲಿ ಮಹಿಳಾ ಆಯೋಗ ಮುಖ್ಯಸ್ಥೆ ಸ್ವಾತಿ ಮಳಿವಾಳ್ ಅವರು ಹೇಳಿದ್ದಾರೆ.
ಕೆಲಸ ಕೊಡಿಸುವುದಾಗಿ 16 ಯುವತಿಯರನ್ನು ನೇಪಾಳದಿಂದ ದೆಹಲಿಗೆ ಕರೆತರಲಾಗಿದ್ದು, ಯುವತಿಯರನ್ನು ಇರಾನ್ ಮತ್ತು ಕುವೈತ್'ಗೆ ಸಾಗಾಣೆ ಮಾಡಲಾಗುತ್ತಿದೆ ಎಂದು ಸರ್ಕಾರೇತರ ಸಂಸ್ಥೆ (ಎನ್'ಜಿಒ)ವೊಂದು ಮಾಹಿತಿ ನೀಡಿತ್ತು. ಈ ಮಾಹಿತಯನ್ನು ಆಧರಿಸಿ ಸ್ಥಳಕ್ಕೆ ಭೇಟಿ ನೀಡಿ 16 ಯುವತಿಯನ್ನು ರಕ್ಷಣೆ ಮಾಡಲಾಯಿತು. 7 ಯುವತಿಯರನ್ನು ಮೊದಲೇ ಸಾಗಣೆ ಮಾಡಿರುವ ಕುರಿತು ಮಾಹಿತಿ ಬಂದಿದೆ ಎಂದು ತಿಳಿಸಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ಮುನಿರ್ಕಾಗೆ ತಂಡದೊಂದಿಗೆ ಸ್ಥಳಕ್ಕೆ ಹೋಗಿದ್ದೆ. ದೆಹಲಿ ಪೊಲೀಸರಿಗೂ ಈ ಬಗ್ಗೆ ಮಾಹಿತಿ ನೀಡಲಾಗಿತ್ತು. ಬಳಿಕ ಯುವತಿಯರನ್ನು ರಕ್ಷಣೆ ಮಾಡಲಾಯಿತು. ಇರಾನ್ ಹಾಗೂ ಕುವೈತ್ ನಲ್ಲಿ ಕೆಲಸ ಕೊಡಿಸುವುದಾಗಿ ಏಜೆಂಟ್ ಒಬ್ಬರು ಹೇಳಿದ್ದರು ಎಂದು ಯುವತಿಯೊಬ್ಬಳು ಹೇಳಿದ್ದಾಳೆಂದು ಸ್ವಾತಿ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಮಧ್ಯಪ್ರವೇಶ ಮಾಡಿ, ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಬೇಕೆಂದು ಹೇಳಿದ್ದಾರೆ.