ರಾಯಪುರ: ಬ್ಯಾಂಕುಗಳು ವಿವಿಧ ವ್ಯವಹಾರ, ಮತ್ತಿತರ ಸೇವೆಗಳಿಗೆ ಗ್ರಾಹಕರಿಂದ ಪಡೆಯುವ ಶುಲ್ಕಗಳು ಸಮಾಂಜಸ ಹಾಗೂ ಏಕರೂಪತೆಯಿಂದ ಕೂಡಿರಲಿ ಎಂದು ಛತ್ತೀಸ್ ಗಡದ ಹೈಕೋರ್ಟ್ ಇಂದು ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ.
ವಕೀಲ ಸಲೀಂ ಕಾಜಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ಅಜಯ್ ಕುಮಾರ್ ತ್ರಿಪಾಠಿ ಮತ್ತು ನ್ಯಾಯಧೀಶ ಪ್ರಶಾಂತ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ , ಈ ಆದೇಶ ನೀಡಿದೆ.
ಬ್ಯಾಂಕುಗಳ ಖಾತೆಯಲ್ಲಿ ಕನಿಷ್ಠ ತಿಂಗಳ ಸರಾಸರಿ ಸಮತೋಲನ ಮತ್ತು ವ್ಯವಹಾರ ದರ ಸಂಬಂಧ ವಿವಿಧ ಬ್ಯಾಂಕುಗಳು ಹೊರಡಿಸಿದ ಆದೇಶದ ವಿರುದ್ಧ ಕಾಜಿ ಅರ್ಜಿ ಸಲ್ಲಿಸಿದ್ದರು. ಆದಾಗ್ಯೂ, ಕನಿಷ್ಠ ತಿಂಗಳ ಸರಾಸರಿ ಸಮತೋಲನ ಬಗ್ಗೆ ನ್ಯಾಯಾಲಯ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.
ವಿವಿಧ ಬ್ಯಾಂಕುಗಳು ಪಡೆಯುತ್ತಿದ್ದ ಶುಲ್ಕಗಳು ತಾರತಾಮ್ಯದಿಂದ ಕೂಡಿದ್ದರಿಂದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಬ್ಯಾಂಕುಗಳ ಗ್ರಾಹಕರಿಂದ ಪಡೆಯುವ ಶುಲ್ಕಗಳು ಸಮಾಂಜಸ ಹಾಗೂ ಏಕರೂಪತೆಯಿಂದ ಕೂಡಿರಲಿ ಎಂದು ನ್ಯಾಯಾಲಯ ಆದೇಶ ನೀಡಿದೆ ಎಂದು ಕಾಜಿ ಸುದ್ದಿಗಾರರಿಗೆ ತಿಳಿಸಿದ್ದಾರೆ.