ಅಹ್ಮದಾಬಾದ್: ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವುದು ತಪ್ಪು ಎಂದಾದರೆ ಹೌದು.. ನಾನು ತಪ್ಪಿತಸ್ಥ ಎಂದು ಪಾಟಿದಾರ್ ಆಂದೋಲನದ ಪ್ರಮುಖ ಹೋರಾಟಗಾರ ಹಾರ್ದಿಕ್ ಪಟೇಲ್ ಹೇಳಿದ್ದಾರೆ.
2015ರ ಗುಜರಾತ್ ಗಲಭೆ ಪ್ರಕರಣ ಸಂಬಂಧ ಇಂದು ತೀರ್ಪು ನೀಡಿದ ಮೆಹ್ಸಾನಾ ಕೋರ್ಟ್ ಹಾರ್ದಿಕ್ ಪಟೇಲ್ ಮತ್ತು ಆತನ ಸಹಚರರನ್ನು ತಪ್ಪಿತಸ್ಥರು ಎಂದು ಹೇಳಿ ತಲಾ 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿತ್ತು. ತೀರ್ಪು ಪ್ರಕಟವಾದ ಬೆನ್ನಲ್ಲೇ ಟ್ವಿಟರ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಹಾರ್ದಿಕ್ ಪಟೇಲ್, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವುದು ತಪ್ಪು ಎಂದಾದರೆ ಹೌದು.. ನಾನು ತಪ್ಪಿತಸ್ಥ. ಜೈಲಿಗೆ ಅಟ್ಟಿದ ಮಾತ್ರಕ್ಕೇ ಬಿಜೆಪಿಯಿಂದ ನನ್ನ ಧನಿ ಅಡಗಿಸಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
'ಸಾಮಾಜಿಕ ನ್ಯಾಯಾಕ್ಕಾಗಿ ಹೋರಾಡುವುದೇ ತಪ್ಪು ಎಂದಾದರೆ ಹೌದು.. ನಾನು ತಪ್ಪಿತಸ್ಥ, ಸತ್ಯ ಮತ್ತು ಅಧಿಕಾರಶಾಹಿತ್ವದ ವಿರುದ್ಧ ಹೋರಾಡುವವನು ಬಂಡುಕೋರ ಎಂದಾದರೆ ಹೌದು.. ನಾನು ಬಂಡುಕೋರ, ಜೈಲಿಗೆ ಅಟ್ಟಿದ ಮಾತ್ರಕ್ಕೆ ಸತ್ಯ, ರೈತರ ಪರ ಮತ್ತು ಯುವಕರ ಪರ ಹೋರಾಡುವ ನನ್ನ ಧನಿಯನ್ನು ಬಿಜೆಪಿಯ 'ಹಿಟ್ಲರ್' ಸರ್ಕಾರದಿಂದ ಅಡಗಿಸಲು ಸಾಧ್ಯವಿಲ್ಲ. ಯಾವುದೇ ಸಮಸ್ಯೆಯನ್ನು ಆ ಸಮಸ್ಯೆಯ ಮಟ್ಟದಲ್ಲೇ ಯೋಚಿಸಿದರೇ ಅದನ್ನು ನಿವಾರಿಸಲು ಸಾಧ್ಯವಿಲ್ಲ. ಆ ಸಮಸ್ಯೆಯನ್ನು ಅದಕ್ಕಿಂತ ಉನ್ನತ ಮಟ್ಟದಲ್ಲಿ ನಿಂತು ಯೋಚಿಸಿದಾಗ ಮಾತ್ರ ಅದನ್ನು ನಿವಾರಿಸಬಹುದು.'
ಸಾವನ್ನು ಸೆರೆಗಿನಲ್ಲಿ ಕಟ್ಟಿಕೊಂಡು ಹೋರಾಟ ಮಾಡುತ್ತಿದ್ದೇನೆ. ಜೈಲಿಗಟ್ಟಿದ ಮಾತ್ರಕ್ಕೇ ನಾನು ಹೆದರುವುಗಿಲ್ಲ. ಸಮಸ್ಯೆ ನನ್ನದೊಬ್ಬನದೇ ಆಗಿದ್ದರೆ ಮನೆಯಲ್ಲೇ ಕುಳಿತು ಬಿಡುತ್ತಿದ್ದೆ. ಆದರೆ ಸಮಸ್ಯೆ ನನ್ನದೊಬ್ಬನದ್ದಲ್ಲ, ಕೋಟ್ಯಂತರ ಬಡ ಜನರದ್ದು. ಮನೆಯಲ್ಲಿ ಕೂರುವ ಪ್ರಶ್ನೆಯೇ ಇಲ್ಲ ಎಂದು ಹಾರ್ದಿಕ್ ಪಟೇಲ್ ಟ್ವೀಟ್ ಮಾಡಿದ್ದಾರೆ.
ಇನ್ನು 2015ರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ನ ಮೆಹ್ಸಾನಾ ಕೋರ್ಟ್, ಹಾರ್ದಿಕ್ ಪಟೇಲ್ ಮತ್ತು ಆತನ ಮೂವರು ಸಹಚರರನ್ನು ಅಪರಾಧಿಗಳು ಎಂದು ತೀರ್ವು ನೀಡಿ, 2 ವರ್ಷ ಜೈಲು ಶಿಕ್ಷೆ ವಿಧಿಸಿದೆ.