ದೇಶ

ಧೂರ್ತ 'ಎನ್`ಆರ್`ಐ ಪತಿ' ಮಹಾಶಯರಿಗೆ ವಿದೇಶಾಂಗ ಇಲಾಖೆಯಿಂದ ಮೂಗುದಾರ!

Srinivasamurthy VN
ನವದೆಹಲಿ: ವಿದೇಶದಲ್ಲಿರುವ ಭಾರತೀಯ ಪತಿ ಮಹಾಶಯರಿಗೆ ವಿದೇಶಾಂಗ ಇಲಾಖೆ ಶಾಕಿಂಗ್ ನ್ಯೂಸ್ ನೀಡಿದ್ದು, ಪತ್ನಿಯನ್ನು ತೊರೆಯುವ ಅಥವಾ ಅವರಿಗೆ ಕಿರುಕುಳ ನೀಡುವವರನ್ನು ಘೋಷಿತ ಅಪರಾಧಿ ಎಂದು ಘೋಷಣೆ ಮಾಡಿ ಅವರ ಆಸ್ತಿ-ಪಾಸ್ತಿಗಳನ್ನು ಜಪ್ತಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಈ ಬಗ್ಗೆ ಕೇಂದ್ರ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದ್ದು, ಎನ್ ಆರ್ ಐ ವೈವಾಹಿಕ ಅಪರಾಧಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದೆ. ಇದೇ ವಿಚಾರವಾಗಿ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮಾತನಾಡಿದ್ದು, ದೂರ್ತ ಎನ್ ಆರ್ ಐ ಪತಿ ಮಹಾಶಯರನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹೊಸದೊಂದು ಕಾನೂನು ತರಲು ಚಿಂತಿಸಲಾಗಿದೆ ಎಂದು ಹೇಳಿದ್ದಾರೆ.
ವಿದೇಶಗಳಲ್ಲಿರುವ ಭಾರತೀಯ ಮೂಲದ ದೂರ್ತ ಪತಿಯರಿಗೆ ಮೂಗುದಾರಹಾಕಲು ಹೊಸ ಕಾನೂನು ರಚನೆಗೆ ಚಿಂತಿಸಲಾಗಿದೆ. ಅದರಂತೆ ಪತ್ನಿಯರನ್ನು ದೂರ ಮಾಡುವ ಅಥವಾ ಅವರಿಗೆ ತೊಂದರೆ ನೀಡುವ ಪತಿಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅಕ್ರಮ ಮದುವೆ, ಪತ್ನಿಯರನ್ನು ಕಾನೂನು ಬಾಹಿರವಾಗಿ ತೊರೆಯುವುದು, ಇತರೆ ಗೃಹ ಹಿಂಸಾಚಾರ ನಡೆಸಿದರೆ ಅಂತಹವ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಇಂತಹ ಪತಿಯರನ್ನು ಗುರುತಿಸಿ ವಿದೇಶಾಂಗ ಇಲಾಖೆಯ ಮೂಲಕ ಸಮನ್ಸ್, ವಾರಂಟ್ ಜಾರಿ ಮಾಡಲಾಗುತ್ತದೆ.
ಇದಕ್ಕಾಗಿ ಇಲಾಖೆ ಪ್ರತ್ಯೇಕ ವೆಬ್ ಸೈಟ್ ಅನ್ನೇ ಜಾರಿಗೆ ತರಲು ನಿರ್ಧರಿಸಿದೆ. ಇಲಾಖೆಯ ಈ ಹೊಸ ಅಧಿಕೃತ ವೆಬ್ ಸೈಟಿನಲ್ಲಿ ಪತಿಯರಿ ವಿರುದ್ಧ ಬರುವ ದೂರುಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಒಂದು ವೇಳೆ ಇದಕ್ಕೆ ಅವರು ಪ್ರತಿಕ್ರಿಯಿಸದಿದ್ದರೆ ಆಗ ಅವರ ವಿರುದ್ಧ ಸಮನ್ಸ್ ಮತ್ತು ವಾರಂಟ್ ಜಾರಿ ಮಾಡಲಾಗುತ್ತದೆ. ಒಂದು ವೇಳೆ ಅದಕ್ಕೂ ಸ್ಪಂದಿಸದಿದ್ದರೆ ಆಗ ಅಂತಹ ವ್ಯಕ್ತಿಯನ್ನು ಘೋಷಿತ ಅಪರಾಧಿ ಎಂದು ಘೋಷಣೆ ಮಾಡಲಾಗುತ್ತದೆ. ಅಲ್ಲದೆ ಅಂತಹ ವ್ಯಕ್ತಿಗೆ ಸಂಬಂಧಿಸಿದ ಆಸ್ತಿಯನ್ನು ಜಪ್ತಿ ಮಾಡಲಾಗುತ್ತದೆ ಎಂದು ಸುಷ್ಮಾ ಸ್ವರಾಜ್ ಮಾಹಿತಿ ನೀಡಿದರು.
ಅಂತೆಯೇ ಈ ನೂತನ ಕಾನೂನನ್ನು ಸಂಸತ್ ಅಧಿವೇಶನದಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಕಾರ್ಯ ನಿವೃತ್ತರಾಗಿದ್ದಾರೆ ಎಂದು ಹೇಳಿದರು.
ಒಟ್ಟಾರೆ ಪತ್ನಿಯರಿಗೆ ಕಿರುಕುಳ ನೀಡಿ ವಿದೇಶಕ್ಕೆ ಹೋಗಿ ಅರಾಮವಾಗಿ ಕುಳಿತುಕೊಳ್ಳುವ ಪತಿ ಮಹಾಶಯರು ಇನ್ನು ಮುಂದೆ ಪ್ರತಿನಿತ್ಯ ಸರ್ಕಾರದ ವೆಬ್ ಸೈಟ್ ನೋಡಬೇಕಾದ ಅನಿವಾರ್ಯತೆ ಎದುರಾಗುತ್ತದೆ.
SCROLL FOR NEXT