ಗೋರಖ್ ಪುರ (ಉತ್ತರ ಪ್ರದೇಶ): ಗುರುಪೂರ್ಣಿಮಾ ವಿಶೇಷ ದಿನದ ಪ್ರಯುಕ್ತ ಉತ್ತರ ಪ್ರದೇಶದ ಗೋರಖ್ ಪುರದ ಗೋರಖನಾಥ ದೇವಸ್ಥಾನದಲ್ಲಿ ನಡೆದ ಪೂಜೆಯ ಸಮಯ ಸಮವಸ್ತ್ರಧಾರಿಯಾಗಿದ್ದ ಪೋಲೀಸ್ ಅಧಿಕಾರಿಯೊಬ್ಬರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.
ಮುಖ್ಯಮಂತ್ರಿ ಯೋಗುಇ ಎದುರು ಮಂಡಿಯೂರಿ ಆಶೀರ್ವಾದ ಬೇಡುತ್ತಿರುವ ಪೋಲೀಸ್ ಅಧಿಕಾರಿ ಪ್ರವೀಣ್ ಸಿಂಗ್ ಚಿತ್ರ ಈಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ಯೋಗಿ ಆದಿತ್ಯನಾಥ್ ಗೋರಖ್ ಪುರ ಗೋರಖನಾಥ ಮಠದ ಪೀಠಾಧ್ಯಕ್ಷ ಹಾಗು ಮುಖ್ಯ ಅರ್ಚಕರೆನ್ನುವುದು ಗಮನಾರ್ಹ.
ಈ ಸಂಬಂಧ ಉತ್ತರ ಪ್ರದೇಶ ಪೋಲೀಸ್ ಇಲಾಖೆ ಪ್ರವೀಣ್ ಸಿಂಗ್ ನಿಲುವಿನ ಸ್ಪಷ್ಟೀಕರಣ ಕೇಳಿದ್ದು ಇದಕ್ಕೆ ಉತ್ತರಿಸಿರುವ ಅಧಿಕಾರಿ "ನಾನು ಗೋರಖನಾಥ ದೇವಸ್ಥಾನದ ಭದ್ರತಾ ನಿರ್ವಹಣೆಗಾಗಿ ನಿಯೋಜಿತನಾಗಿದ್ದೆ. ಒಮ್ಮೆ ಕರ್ತವ್ಯ ಮುಗಿದ ಬಳಿಕ ಪೋಲೀಸ್ ಕ್ಯಾಪ್, ಬೆಲ್ಟ್ ಹಾಗೂ ಇತರೆ ಗೌರವಯುತ ಚಿನ್ಹೆಗಳನ್ನು ತೆಗೆದಿಟ್ಟು ತಲೆಗೆ ಟವೆಲ್ ಅನ್ನು ರುಮಾಲಿನಂತೆ ಸುತ್ತಿ ಪೀಠಾಧ್ಯಕ್ಷರಾದ ಯೋಗಿ ಆದಿತ್ಯನಾಥರ ಆಶೀರ್ವಾದ ಪಡೆದಿದ್ದೇನೆ" ಎಂದಿದ್ದಾರೆ.
"ನನ್ನ ಶರ್ಟ್ ಬೆವರುದಿಂದ ಒದ್ದೆಯಾಗಿತ್ತು ಮತ್ತು ನನ್ನ ಕೆಲಸವನ್ನು ನಾನು ಕಡೆಗಣಿಸಲಿಲ್ಲ. ಮಹಂತರು ದಸರಾ ಹಾಗು ಗುರುಪೂರ್ಣಿಮಾ ಸಮಯದಲ್ಲಿ ದೇವಸ್ಥಾನದಲ್ಲಿರುತ್ತಾರೆ.ನಾನು ಪ್ರಾಮಾಣಿಕವಾಗಿ ಮತ್ತು ಸಮರ್ಪಣಾ ಮನೋಭಾವದೊಂದಿಗೆ ದೇಶಸೇವೆ ಸಲ್ಲಿಸಿದ್ದೇನೆ" ಅವರು ವಿವರಿಸಿದ್ದಾರೆ.