ನವದೆಹಲಿ: ಕಾಂಗ್ರೆಸ್ ಸೋಷಿಯಲ್ ಮೀಡಿಯಾ ವಿಭಾಗದ ಸದಸ್ಯರೊಬ್ಬರು ಲೈಂಗಿಕ ಕಿರುಕುಳ ಆರೋಪದಲ್ಲಿ ಬಂಧಿಸಲ್ಪಟ್ಟು ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಜಾಮೀನು ಪಡೆದು ಬಿಡುಗಡೆಯಾದ ಸಿಬ್ಬಂದಿ ಬಗ್ಗೆ ಎಐಸಿಸಿ ಸೋಷಿಯಲ್ ಮೀಡಿಯಾ ವಿಭಾಗದ ಅಧ್ಯಕ್ಷೆ ರಮ್ಯಾ ಸ್ಟ್ವೀಟ್ ಮಾಡಿ ಸ್ಪಷ್ಟನೆ ನಿಡಿದ್ದಾರೆ.
ಮಾಜಿ ಉದ್ಯೋಗಿಯ ದೂರಿನ ಕುರಿತು ಪಕ್ಷವು ಆಂತರಿಕ ತನಿಖೆ ಕೈಗೊಂಡಿದೆ. ಇದಕ್ಕಾಗಿ ಸಮಿತಿಯೊಂದನ್ನು ರಚಿಸಲಾಗಿದ್ದು ದೂರಿನ ಹಿನ್ನೆಲೆಯನ್ನಿಟ್ಟುಕೊಂಡು ಪಾರದರ್ಶಕ ತನಿಖೆ ಕೈಗೊಳ್ಳಲಾಗುತ್ತದೆ ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.
ರಮ್ಯಾ ಮುಖ್ಯಸ್ಥರಾಗಿರುವ ಎಐಸಿಸಿ ಸೋಷಿಯಲ್ ಮೀಡಿಯಾ ತಂಡದಲ್ಲಿ ಕೆಲಸ ಮಾಡುತ್ತಿರುವ ಚಿರಾಗ್ ಪಟ್ನಾಯಕ್(39) ಎನ್ನುವವರು ತನಗೆ ಲೈಂಗಿಕ ಕಿರುಕುಳ ನಿಡಿದ್ದರು ಎಂದು ತಂಡದಲ್ಲಿದ್ದ ಮಾಜಿ ಉದ್ಯೋಗಿಯೊಬ್ಬರು ದೂರು ಸಲ್ಲಿಸಿದ್ದರು.
ತಮಗಾದ ಕೆಟ್ಟ ಅನುಭವದ ಕುರಿತು ರಮ್ಯಾ ಗೆ ಸಹ ಆ ವ್ಯಕ್ತಿ ದುರು ಕೊಟ್ಟಿದ್ದರೂ ರಮ್ಯಾ ಚಿರಾಗ್ ವಿರುದ್ಧ ಯಾವ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಬೇಸತ್ತ ಆ ವ್ಯಕ್ತಿ ದೆಹಲಿಯ ನಾರ್ಥ್ ಅವೆನ್ಯೂ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.ಐಪಿಸಿ ಸೆಕ್ಷನ್ 354ಎ(ಲೈಂಗಿಕ ಕಿರುಕುಳ), 509(ಶಬ್ದ, ಸನ್ನೆಯ ಮೂಲಕ ಮಹಿಳೆಯರಿಗೆ ಅವಮಾನ) ಅಡಿಯಲ್ಲಿ ದೂರು ದಾಖಲಾಗಿತ್ತು. ದೂರಿನ ಹಿನ್ನೆಲೆಯಲ್ಲಿ ಪೋಲೀಸರು ಚಿರಾಗ್ ನನ್ನು ಬಂಧಿಸಿದ್ದರು. ಆದರೆ ಬಂಧನವಾಗಿ ಒಂದು ಗಂಟೆಯೊಳಗೆ ಚಿರಾಗ್ ಜಾಮೀನು ಪಡೆದು ಹೊರ ಬಂದಿದ್ದಾರೆ.
ಮಾಜಿ ಉದ್ಯೋಗಿಯ ಆರೋಪದಲ್ಲಿ ಯಾವ ಹುರುಳಿಲ್ಲ, ಚಿರಾಗ್ ವ್ಯಕ್ತಿತ್ವ ಉತ್ತಮವಾಗಿದೆ, ಇವರ ಪರವಾಗಿ ತಂಡದ ಇತರೆ 39 ಸದಸ್ಯರು ಸಹಿ ಮಾಡಿದ ಸನ್ನಡತೆ ಪ್ರಮಾಣಪತ್ರ ಬಂದಿದೆ ಎಂದು ರಮ್ಯಾ ಸಮಜಾಯಿಷಿ ನೀಡಿದ್ದಾರೆ.