ಜಾರಿ ನಿರ್ಧೇಶನಾಲಯ (ಸಂಗ್ರಹ ಚಿತ್ರ)
ನವದೆಹಲಿ: 5ಸಾವಿರ ಕೋಟಿ ರೂಪಾಯಿ ಮೌಲ್ಯದ ಬ್ಯಾಂಕಿಂಗ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಮೂಲದ ಔಷಧ ತಯಾರಿಕಾ ಕಂಪನಿ ಸ್ಟರ್ಲಿಂಗ್ ಬಯೋಟೆಕ್ ಗ್ರೂಪ್ಗೆ ಸೇರಿದ 4,701 ರು. ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.
ಅಕ್ರಮ ಹಣಕಾಸು ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಕಂಪನಿಗೆ ಸೇರಿದ 400 ಎಕರೆ ಆಸ್ತಿ, ಕಂಪನಿ ಹಾಗೂ ಹಲವರ ಹೆಸರಿನಲ್ಲಿದ್ದ 200 ಬ್ಯಾಂಕ್ ಖಾತೆಗಳಲ್ಲಿರುವ 6.67 ಕೋಟಿ ರು.ಹಣ, ಯಂತ್ರೋಪಕರಣಗಳು, ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಡೇಸಾರಾ ಸೋದರರಾದ ನಿತಿನ್, ಚೇತನ್ ಮತ್ತು ಅವರಿಗೆ ಸೇರಿದ ಕಂಪನಿ ವಿರುದ್ಧ 2017ರ ಅಕ್ಟೋಬರ್ನಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮೂಲದ ಉದ್ಯಮಿ ಗಗನ್ ಧವನ್, ಆಂಧ್ರ ಬ್ಯಾಂಕ್ ನಿರ್ದೇಶಕ ಅನೂಪ್ ಪ್ರಕಾಶ್ ಗರ್ಗ್ ಮತ್ತು ಸ್ಟರ್ಲಿಂಗ್ ಬಯೋಟೆಕ್ ಲಿಮಿಟೆಡ್ ನಿರ್ದೇಶಕ ರಾಜ್ಭೂಷಣ್ ದೀಕ್ಷಿತ್ ಅವರನ್ನು ಈಗಾಗಲೇ ಬಂಧಿಸಲಾಗಿದೆ.
‘ಸಂಸ್ಥೆ ಹಾಗು ಸಂಸ್ಥೆಯ ಪ್ರವರ್ತಕರು (ಸಂಡೇಸಾರಾ ಸೋದರರು) ಸುಳ್ಳು ದಾಖಲೆಗಳನ್ನು ನೀಡಿ ವಿವಿಧ ಬ್ಯಾಂಕ್ಗಳಿಂದ ರು,.5000 ಕೋಟಿ ಹಣಕಾಸಿನ ಸೌಲಭ್ಯ ಪಡೆದು ವಂಚಿಸಿದ್ದಾರೆ. ಅದು ಈಗ ವಸೂಲಿಯಾಗದ ಸಾಲದ ಮೊತ್ತವಾಗಿ (ಎನ್ಪಿಎ) ಬದಲಾಗಿದೆ. ಪ್ರವರ್ತಕರು ಸದ್ಯ ತಲೆ ಮರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos