ನಕಲಿ ಎನ್ ಕೌಂಟರ್ ಪ್ರಕರಣ: ಸೋಹ್ರಾಬುದ್ಧಿನ್, ಆತನ ಪತ್ನಿಯನ್ನು ಪೊಲೀಸರು ಕೊಂದರು, ಪ್ರಜಾಪತಿ ಹೆದರಿದ್ದ!
ಮುಂಬೈ: ಗುಜರಾತ್ ನಲ್ಲಿ ನಡೆದಿರುವ ನಕಲಿ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಕೌಂಟರ್ ನಲ್ಲಿ ಹತನಾದ ತುಳಸಿರಾಮ್ ಪ್ರಜಾಪತಿಯ ಸಹ ಖೈದಿ ಸಿಬಿಐ ವಿಶೇಷ ನ್ಯಾಯಾಲಯದ ಎದುರು ಕೆಲವು ಅಂಶಗಳನ್ನು ಬಹಿರಂಗಪಡಿಸಿದ್ದಾನೆ.
2006 ರಲ್ಲಿ ನಡೆದಿದ್ದ ತುಳಸಿರಾಮ್ ಪ್ರಜಾಪತಿ, 2005 ರಲ್ಲಿ ನಡೆದಿದ್ದ ಆತನ ಸಹಚರ ಸೋಹ್ರಬುದ್ಧಿನ್ ಶೇಖ್ ಹಾಗೂ ಸೋಗ್ರಾಬುದ್ಧಿನ್ ನ ಪತ್ನಿ ಕೌಸರ್ ಬಿ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇಶ್ ಗುಜರ್(64) ಕೋರ್ಟ್ ಎದುರು ಹೇಳಿಕೆ ನೀಡಿದ್ದು, ಸೋಹ್ರಾಬುದ್ಧಿನ್, ಆತನ ಪತ್ನಿಯನ್ನು ಗುಜರಾತ್ ಪೊಲೀಸರು ಎನ್ ಕೌಂಟರ್ ಮಾಡಿದ ನಂತರ ತುಳಸಿರಾಮ್ ಪ್ರಜಾಪತಿಯೂ ಹೆದರಿದ್ದ, ಈ ಬಗ್ಗೆ ಮಾನವ ಹಕ್ಕುಗಳ ಆಯೋಗಕ್ಕೂ ಪತ್ರ ಬರೆದಿದ್ದ ಎಂದು ದಿನೇಶ್ ಗುಜರ್ ಹೇಳಿದ್ದಾರೆ.
2006 ರಲ್ಲಿ ಉದಯ್ ಪ್ಪುರ ಕೇಂದ್ರ ಕಾರಾಗೃಹದಲ್ಲಿ ಗುಜರ್ ಪ್ರಜಾಪತಿಯೊಂದಿಗೆ ಇದ್ದ. "ಗುಜರಾತ್ ಪೊಲೀಸರು ನನ್ನ ಸ್ನೇಹಿತ ಸೋಹ್ರಬುದ್ದೀನ್ ಹಾಗೂ ಆತನ ಪತ್ನಿಯನ್ನು ಹತ್ಯೆ ಮಾಡಿದ್ದರು, ನನಗೂ ಅದೇ ಸ್ಥಿತಿ ಎದುರಾಗಬಹುದು ಎಂದು ಹೇಳಿದ್ದ" ಎಂದು ದಿನೇಶ್ ಗುಜರ್ ಕೋರ್ಟ್ ಎದುರು ಹೇಳಿಕೆ ನೀಡಿದ್ದಾರೆ.
ಗುಜರಾತ್ ನ ಉದ್ಯಮಿಯಿಂದ 25 ಕೋಟಿರೂಪಾಯಿಗಳನ್ನು ಒತ್ತಾಯಪೂರ್ವಕವಾಗಿ ಪಡೆಯಲು ಪ್ರಜಾಪತಿ ಹಾಗೂ ಸೋಹ್ರಬುದ್ದೀನ್ ಯತ್ನಿಸಿದ್ದರು, ಈ ಬಗ್ಗೆ ಉದ್ಯಮಿ ಹಿರಿಯ ಅಧಿಕಾರಿಯೊಬ್ಬರಿಗೆ ಮಾಹಿತಿ ನೀಡಿದ್ದರು, ನಂತರ ಆ ಅಧಿಕಾರಿ ಪೊಲೀಸ್ ಎನ್ ಕೌಂಟರ್ ಮಾಡಿಸಿ ಹತ್ಯೆ ಮಾಡಿಸಿದ್ದಾರೆ ಎಂದು ದಿನೇಶ್ ಗುಜರ್ ಕೋರ್ಟ್ ನಲ್ಲಿ ಸಾಕ್ಷಿ ನುಡಿದಿದ್ದಾರೆ.
ಜೀವ ಭಯ ಕಾಡುತ್ತಿದೆ ಎಂದು ಪ್ರಜಾಪತಿ ತನ್ನಲ್ಲಿ ಹೇಳಿಕೊಂಡಿದ್ದ, ಆದ್ದರಿಂದ ನಾನೇ ಆತನಿಗೆ ಮಾನವ ಹಕ್ಕುಗಳ ಆಯೋಗವನ್ನು ಸಂಪರ್ಕಿಸಲು ಪತ್ರಗಳನ್ನು ಬರೆಯಲು ಸಹಾಯ ಮಾಡುತ್ತಿದ್ದೆ ಎಂದು ದಿನೇಶ್ ಗುಜರ್ ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos