ವಿಎಚ್ಪಿ ಕಾರ್ಯಕರ್ತರಿಂದ ತಾಜ್ ಮಹಲ್ ಪಶ್ಚಿಮ ದ್ವಾರ ದ್ವಂಸ
ಆಗ್ರಾ (ಉತ್ತರ ಪ್ರದೇಶ): ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರ ಗುಂಪೊಂದು ಭಾನುವಾರ ವಿಶ್ವ ವಿಖ್ಯತ ತಾಜ್ ಮಹಲ್ ನ ಪಶ್ಚಿಮ ದ್ವಾರವನ್ನು ಧ್ವಂಸಗೊಳಿಸಿದೆ. ತಾಜ್ ಮಹಲ್ ನ ಪಶ್ಚಿಮ ದ್ವಾರವನ್ನು ಕಿತ್ತೆಸೆದ ಕಾರ್ಯಕರ್ತರ ವಿರುದ್ಧ ಭಾರತೀಯ ಪುರಾತತ್ವ ಇಲಾಖೆ (ಎಎಸ್ಐ) ಆಗ್ರಾ ಪೋಲೀಸರಿಗೆ ದೂರು ನೀಡಿದೆ.
ತಾಜ್ ಮಹಲ್ ನ ನಿರ್ಬಂಧಿತ ಪ್ರದೇಶದಲ್ಲಿ 400 ವರ್ಷಗಳಷ್ಟು ಹಳೆಯದಾದ ಶಿವ ದೇಗುಲಕ್ಕೆ ಹೋಗುವ ಮಾರ್ಗವಿದೆ. ಈ ಮಾರ್ಗಕ್ಕೆ ಭವ್ಯ ಸೌಧದ ಆವರಣ ಅಡ್ಡಿಯಾಗಿದೆ ಎಂದ ಪ್ರತಿಭಟನಾಕಾರರು ತಾಜ್ ಆವರಣದಲ್ಲಿ ದಾಂಧಲೆ ನಡೆಸಿದ್ದಾರೆ.
ಘಟನೆಗೆ ಸಂಬಂಧಿಸಿದ ವೀಡಿಯೋ ದೃಶ್ಯದಲ್ಲಿ ಎಎಸ್ಐ ಸ್ಥಾಪಿಸಿದ ಗೇಟ್ ಅನ್ನು ತೆಗೆದುಹಾಕುವುದಕ್ಕೆ ಪ್ರಯತ್ನಿಸುತ್ತಿರುವ ವಿಎಚ್ಪಿ ಕಾರ್ಯಕರ್ತರನ್ನು ಕಾಣಬಹುದಾಗಿದೆ. ತಾಜ್ ಮಹಲ್ ಪಶ್ಚಿಮ ಪ್ರವೇಶದ್ವಾರವನ್ನು ಧ್ವಂಸಗೊಳಿಸಲು ಪ್ರಯತ್ನಿಸುತ್ತಿರುವ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಸುತ್ತಿಗೆ ಮತ್ತು ಕಬ್ಬಿಣದ ರಾಡ್ ಅಗಳನ್ನು ಬಳಸಿ ಬಾಗಿಲಿಗೆ ಹೊಡೆಯುತ್ತಿರುವುದು ಕಂಡಿದೆ. ಜತೆಗೆ ಹಿಂದೂ ಕಾರ್ಯಕರ್ತರು ಘೋಷಣೆಗಳನ್ನು ಸಹ ಕೂಗುತ್ತಿದ್ದರು.
ಇದೇ ವೇಳೆ ತಾಜ್ ಪಶ್ಚಿಮ ದ್ವಾರದ ನಂತರ ಸಿಗುವ ಬಸಾಯಿ ಘಾಟ್ ನಲ್ಲಿರುವ ಸಿದ್ದೇಶ್ವರ ದೇವಸ್ಥಾನಕ್ಕೆ ಹೋಗಲು ಇನ್ನೊಂದು ಮಾರ್ಗವಿರುವುದಾಗಿ ಪೋಲೀಸರು ಸ್ಪಷ್ಟಪಡಿಸಿದರೂ ಸಹ ವಿಎಚ್ಪಿ ಸದಸ್ಯರು ಈ ವಿವರಣೆಯಿಂದ ತೃಪ್ತರಾಗಿಲ್ಲ.
ಏತನ್ಮಧ್ಯೆ ಎಎಸ್ಐ ದೂರು ಸಲ್ಲಿಸಿದ ನಂತರ ವಿಎಚ್ಪಿ ಯ ಐದು ಸದಸ್ಯರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಅಲ್ಲದೆ ಗಲಭೆಗೆ ಕಾರಣವಾದ 20-25 ಅನಾಮಧೇಯರ ಮೇಲೆ ಸಹ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೋಲೀಸರು ಹೇಳಿದ್ದಾರೆ.
"ಭಾನುವಾರದಂದು 25-30 ವಿಎಚ್ಪಿ ಕಾರ್ಯಕರ್ತರು ತಾಜ್ ಮಹಲ್ ನ ಪಶ್ಚಿಮ ದ್ವಾರದತ್ತ ಆಗಮಿಸಿದ್ದಾರೆ.ತಾಜ್ ಮಹಲ್ ಮತ್ತು ಸಾಹೇಲಿ ಕಾ ಬುರ್ಜ್ ಟಿಕೆಟ್ ಸಂಗ್ರಹಕ್ಕಾಗಿ ಹೊಸದಾಗಿ ಸ್ಥಾಪಿಸಲಾದ ಗೇಟ್ ಗಳನ್ನು ಧ್ವಂಸಗೊಳಿಸಿದರು. ಪ್ರತಿಭಟನಾಕಾರರು ಅವರೊಂದಿಗೆ ಸುತ್ತಿಗೆಗಳು ಮತ್ತು ಕಬ್ಬಿಣದ ರಾಡ್ ಗಳನ್ನು ಹೊಂದಿದ್ದರು. ಅವರು ಗೇಟ್ ಮುರಿದು ಅದನ್ನು ಸುಮಾರು 50 ಮೀಟರ್ ದೂರ ಎಸೆದರು. ಅಷ್ಟರಲ್ಲಿ ತಾಜ್ ಸಂರಕ್ಷಣಾ ಪೋಲೀಸ್ ತಂಡವು ಅಲ್ಲಿಗೆ ತಲುಪಿತು ಮತ್ತು ಹೆಚ್ಚಿನ ಹಾನಿಯಾಗುವುದನ್ನು ತಪ್ಪಿಸಿತು" ತಾಜ್ ಸಂರಕ್ಷಣಾ ಪೋಲೀಸ್ ಅಧಿಕಾರಿ (ಸಿಒ) ಪ್ರಭಾತ್ ಕುಮಾರ್ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos