ಮುಂಬೈ: ಕಾಶ್ಮೀರದಲ್ಲಿ ನಡೆಯುತ್ತಿರುವ ಸರಣಿ ಹತ್ಯೆ, ರಕ್ತಪಾತಗಳ ಬಗ್ಗೆ ಎನ್ ಡಿಎ ಮಿತ್ರಪಕ್ಷ ಶಿವಸೇನೆ ಮಾತನಾಡಿದ್ದು, ರಕ್ತಪಾತಕ್ಕೆ ಕೇಂದ್ರದಲ್ಲಿರುವ ಎನ್ ಡಿಎ ಸರ್ಕಾರವೇ ಹೊಣೆ ಎಂದು ಆರೋಪಿಸಿದೆ.
ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಶಿವಸೇನೆ, ರಂಜಾನ್ ತಿಂಗಳಲ್ಲಿ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯನ್ನು ನಡೆಸದಿರಲು ನಿರ್ಧರಿಸಿದ್ದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಭಾರತದ ಈ ನಿರ್ಧಾರದಿಂದ ಪಾಕಿಸ್ತಾನ ಅನುಚಿತ ಲಾಭ ಪಡೆಯಲು ಯತ್ನಿಸಿದೆ ಎಂದು ಶಿವಸೇನೆ ಆರೋಪಿಸಿದೆ.
ಭಯೋತ್ಪಾದಕರು ನಡೆಸಿರುವ ರಕ್ತಪಾತಕ್ಕೆ ಕೇಂದ್ರ ಸರ್ಕಾರದ ನಿರ್ಧಾರವೇ ಕಾರಣವಾಗಿದೆ. ನಮ್ಮ ಸರ್ಕಾರ ರಂಜಾನ್ ತಿಂಗಳಲ್ಲಿ ಸೇನಾ ದಾಳಿ ನಡೆಸದಿರಲು ತೀರ್ಮಾನಿಸಿತ್ತು. ಆದರೆ ಪಾಕಿಸ್ತಾನ ಅದಕ್ಕೆ ಪೂರಕವಾಗಿ ನಡೆದುಕೊಂಡಿಲ್ಲ ಎಂದು ಸಂಪಾದಕೀಯ ಹೇಳಿದ್ದು, ಕಾಶ್ಮೀರದಲ್ಲಿ ರಕ್ತಪಾತ ನಡೆಯುತ್ತಿದ್ದರೂ ಪ್ರಧಾನಿ ಮೋದಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಶಿವಸೇನೆ ಅಸಮಾಧಾನ ವ್ಯಕ್ತಪಡಿಸಿದೆ.