ಅಮರಾವತಿ: ಕೇರಳದ ಅನಂತ ಪದ್ಮನಾಭ ಸ್ವಾಮಿ ದೇಗುಲದ ನೆಲಮಾಳಿಗೆಯಲ್ಲಿರುವ ಅಪಾರ ಪ್ರಮಾಣದ ಚಿನ್ನಾಭರಣ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾದ ಸುದ್ದಿ ಇನ್ನೂ ಹಸಿರಾಗಿರುವಾಗಲೇ ವಿಶ್ವ ವಿಖ್ಯಾತ, ಕಲಿಯುಗ ವೈಕುಂಠ ತಿರುಪತಿ ತಿರುಮಲದಲ್ಲಿ ಅದನ್ನೂ ಮೀರಿಸುವ ಅಪಾರ ಸಂಪತ್ತಿರುವ ರಹಸ್ಯ ಕೋಣೆಯೊಂದಿದೆ ಎನ್ನಲಾಗುತ್ತಿದೆ.
ಇಂತಹುದೊಂದು ವಾದಕ್ಕೆ ಕಾರಣವಾಗಿದ್ದು, ಟಿಟಿಡಿಯ ಮಾಜಿ ಪ್ರಧಾನ ಅರ್ಚಕ ಹಾಗೂ ಆಗಮಶಾಸ್ತ್ರ ತಜ್ಞ ರಮಣ ದೀಕ್ಷಿತುಲು ಅವರ ಆರೋಪ. ರಮಣ ದೀಕ್ಷಿತುಲು ಅವರ ಆರೋಪದಂತೆ ತಿರುಮಲ ದೇಗುಲದ ಸಿಬ್ಬಂದಿಗಳು ಆಡಳಿತ ವರ್ಗದ ಅನುಮತಿ ಇಲ್ಲದೇ ದೇವಾಲಯದ ಪ್ರಸಾದ ತಯಾರಿಸುವ ಕೋಣೆಯನ್ನು ದುರಸ್ತಿ ಮಾಡಿದ್ದರು. ಆದರೆ ಆ ಕೋಣೆಯಲ್ಲಿ ನೆಲವನ್ನು ಅಗಿದುರುವ ಕುರುಹುಗಳು ಪತ್ತೆಯಾಗಿದೆ. ಈ ಬಗ್ಗೆ ತಾವು ವಿಚಾರಿಸಿದಾಗ ಕೋಣೆಯಲ್ಲಿನ ಕಲ್ಲಿನ ನೆಲಹಾಸನ್ನು ಬದಲಿಸಬೇಕಿತ್ತು ಎಂದು ಹೇಳಿದ್ದಾರೆ. ಆದರೆ ಕೇವಲ 5 ರಿಂದ 6 ಕಲ್ಲಿನ ನೆಲಹಾಸುಗಳನ್ನು ಬದಲಿಸಲು ನೆಲವನ್ನು ಅಗೆಯುವ ಅಗತ್ಯವೇನಿತ್ತು. ಅಲ್ಲದೆ ಬರೊಬ್ಬರಿ 25 ದಿನಗಳ ಕಾಲ ಆ ಕೋಣೆಯನ್ನು ಮುಚ್ಚಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ತಮಗೇನೂ ತಿಳಿದಿಲ್ಲ. ತಾವು ಯಾವುದೇ ದುರಸ್ತಿ ಕಾರ್ಯಕ್ಕೂ ಅನುಮತಿ ನೀಡಿಲ್ಲ ಎಂದು ಹೇಳಿದ್ದಾರೆ. ಹಾಗಾದರೇ ಯಾರ ನೇತೃತ್ವದಲ್ಲಿ ಈ ದುರಸ್ತಿಕಾರ್ಯ ನಡೆಯಿತು ಎಂದು ರಮಣ ದೀಕ್ಷಿತುಲು ಪ್ರಶ್ನಿಸಿದ್ದಾರೆ.
1800ರಲ್ಲೇ ಪುಸ್ತಕವೊಂದರಲ್ಲಿ ತಿರುಮಲ ರಹಸ್ಯ ಕೋಣೆಗಳ ಉಲ್ಲೇಖ
ಇನ್ನು ಇದಕ್ಕೆ ಪುಷ್ಠಿ ನೀಡುವಂತೆ 1800ರಲ್ಲೇ ಲೇಖಕನೋರ್ವ ತಿರುಪತಿ ತಿರುಮಲ ದೇಗುಲದ ರಹಸ್ಯ ಅಂಶಗಳ ಕುರಿತು ತನ್ನ ಪುಸ್ತಕದಲ್ಲಿ ಉಲ್ಲೇಖಿಸಿದ್ದಾನೆ. ಲೇಖಕ ವಿಎನ್ ಶ್ರೀನಿವಾಸ ರಾವ್ ಎಂಬುವವರು ತಮ್ಮ 'ಸವಾಲ್ ಇ ಜವಾಬ್' ಪುಸ್ತಕದಲ್ಲಿ ರಹಸ್ಯ ಕೋಣೆಯ ಉಲ್ಲೇಖ ಮಾಡಿದ್ದಾರೆ. ಸುಮಾರು 200 ಪುಟಗಳ ಈ ಪುಸ್ತಕದಲ್ಲಿ 13ನೇ ಪುಟದ ಅಂತ್ಯ ಮತ್ತು 14ನೇ ಪುಟದ ಆರಂಭದಲ್ಲಿರುವ ಆರು ಸಾಲುಗಳು ರಹಸ್ಯ ಕೋಣೆಯ ಉಲ್ಲೇಖ ಮಾಡುತ್ತವೆ. ಪುಸ್ತಕದಲ್ಲಿರುವಂತೆ ದೇಗುಲದ ಪ್ರದಕ್ಷಿಣೆ ಪ್ರಾಂಗಣದ ಕೆಳಗೆ ರಹಸ್ಯ ಕೋಣೆಯಿದ್ದು, ಇಲ್ಲಿ ಅಪಾರ ಪ್ರಮಾಣದ ಸಂಪತ್ತಿದೆ. ಈ ಸಂಪತ್ತಿನ ಮೇಲೆಯೇ ಭಕ್ತರು ನಡೆದಾಡುತ್ತಿದ್ದಾರೆ. ದೇಗುಲದ ಇತರೆ ಕೋಣೆಗಳಂತೆ ಈ ಕೋಣೆಯ ಪ್ರವೇಶ ನಿಷಿದ್ಧ ಎಂದು ಪುಸ್ತಕದಲ್ಲಿ ಉಲ್ಲೇಖ ಮಾಡಲಾಗಿದೆ.
ಇನ್ನು ಈ ರಹಸ್ಯ ಕೋಣೆಗಳ ಇರುವಿಕೆ ಕುರಿತು ಮತ್ತು ಮಾಜಿ ಪ್ರಧಾನ ಅರ್ಚಕ ರಮಣ ದೀಕ್ಷಿತುಲು ಅವರ ಆರೋಪಕ್ಕೆ ಸಂಬಂಧಿಸಿದಂತೆ ಟಿಟಿಡಿ ಪ್ರತಿಕ್ರಿಯೆ ನೀಡಿಲ್ಲ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos