ಶ್ರೀನಗರ; ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ-ಬಿಜೆಪಿ ನಡುವಿನ ಮೈತ್ರಿ ಮುರಿದು ಬಿದ್ದಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತವನ್ನು ಹೇರಲಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಎದುರಾಗಿರುವ ರಾಜಕೀಯ ಬಿಕ್ಕಟ್ಟುಗಳು ರಾಜ್ಯದಲ್ಲಿ ಸೇನಾ ಪಡೆಗಳು ನಡೆಸುತ್ತಿರುವ ಕಾರ್ಯಾಚರಣೆಗಳ ಮೇಲೆ ಯಾವುದೇ ರೀತಿಯ ಪರಿಣಾಮವನ್ನು ಬೀರುವುದಿಲ್ಲ ಎಂದು ಭದ್ರತಾಧಿಕಾರಿಗಳು ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಹಿರಿಯ ಭದ್ರತಾಧಿಕಾರಿಯೊಬ್ಬರು, ರಾಜ್ಯದಲ್ಲಿ ಸೇನಾಪಡೆಗಳು ನಡೆಸುತ್ತಿರುವ ಕಾರ್ಯಾಚರಣೆ ಎಂದಿನಂತೆಯೇ ಮುಂದುವರೆಯಲಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ ಮುರಿದು ಬಿದ್ದರೂ, ಅದು ಭದ್ರತಾ ಪಡೆಗಳ ಕಾರ್ಯಾಚರಣೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.
ಭದ್ರತಾ ಪಡೆಗಳು ಕಾನೂನಿ ಅಡಿಯಲ್ಲಿ ಕಾರ್ಯನಿರ್ವಹಿಸಬೇಕಿರುತ್ತದೆ. ಪ್ರತೀಯೊಂದು ಕಾರ್ಯಾಚರಣೆಯೂ ಕಾನೂನಿನಂತೆಯೇ ನಡೆಸಲಾಗುತ್ತದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಪಕ್ಷ ಆಡಳಿತ ನಡೆಸಲಿ ಅಥವಾ ರಾಜ್ಯಪಾಲರೇ ಆಡಳಿತ ನಡೆಸಿದರೂ ನಮ್ಮ ಕಾರ್ಯಾಚರಣೆಗಳ ಮೇಲೆ ಅದರ ಇರುವುದಿಲ್ಲ.
ರಂಜಾನ್ ಕದನ ವಿರಾಮದ ಬಳಿಕ ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ಈ ಕಾರ್ಯಾಚರಣೆ ಎಂದಿನಂತೆಯೇ ಮುಂದುವರೆಯಲಿದೆ. ಗುಪ್ತಚರ ಇಲಾಖೆಯ ಮಾಹಿತಿಯನ್ವಯ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದೇವೆಂದು ತಿಳಿಸಿದ್ದಾರೆ.
ಮತ್ತೊಬ್ಬ ಭದ್ರತಾಧಿಕಾರಿ ಮಾತನಾಡಿ, ಪರಿಸ್ಥಿತಿ, ಅಗತ್ಯಕ್ಕನುಗುಣವಾಗಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕದನ ವಿರಾಮ ಅಂತಿಮಗೊಂಡಿದ್ದು, ಉಗ್ರರ ವಿರುದ್ಧದ ಕಾರ್ಯಾಚರಣೆಗಳು ಮತ್ತೆ ಆರಂಭಗೊಂಡಿವೆ. ನಾಗರೀಕ ಸರ್ಕಾರದ ಆಡಳಿತವೇ ಆಗಲೀ ಅಥವಾ ರಾಜ್ಯಪಾಲರ ಆಡಳಿತವೇ ಆಗಲಿ, ನಮ್ಮ ಕಾರ್ಯಾಚರಣೆ ಮುಂದುವರೆಯಲಿದೆ. ಯಾವುದೇ ಸರ್ಕಾರಕ್ಕಿಂತಲೂ ದೇಶದ ಭದ್ರತೆ ಅತ್ಯಂತ ಮುಖ್ಯವಾಗುತ್ತದೆ ಎಂದಿದ್ದಾರೆ.
ಈ ನಡುವೆ ಪುಲ್ವಾಮ ಜಿಲ್ಲೆಯ ಟ್ರಾಲ್ ನಲ್ಲಿ ಉಗ್ರರು ಅಡಗಿ ಕುಳಿತಿರುವುದಾಗಿ ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದು, ಸಿಆರ್'ಪಿಎಫ್ ಹಾಗೂ ಸೇನಾ ಪಡೆಗಳು ಕಾರ್ಯಾಚರಣೆಯನ್ನು ಆರಂಭಿಸಿವೆ.
ಸ್ಥಳದಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಭಾರೀ ಗುಂಡಿನ ಚಕಮಕಿ ನಡೆಯುತ್ತಿದ್ದು, ಇಬ್ಬರು ಉಗ್ರರನ್ನು ಸೇನಾಪಡೆಗಳು ಸದೆಬಡಿದಿವೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos