ನವದೆಹಲಿ: ಅಚ್ಚೇ ದಿನ್ ಕಲ್ಪನೆ, ಘೋಷಣೆಗಳ ಮೂಲಕ ಕೇಂದ್ರದಲ್ಲಿ ಅಧಿಕಾರಕ್ಕೇರಿದ್ದ ಬಿಜೆಪಿ ನೇತೃತ್ವ ಎನ್ ಡಿಎ ಮೈತ್ರಿಕೂಟಕ್ಕೆ ನೀತಿ ಆಯೋಗ ಶಾಕ್ ನೀಡಿದ್ದು, ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲೇ ಅಚ್ಚೇ ದಿನ್ ಇಲ್ಲ ಎಂಬ ವರದಿ ನೀಡಿದೆ.
ಹೌದು.. ಶಿಕ್ಷಣ, ಆರೋಗ್ಯ, ಉದ್ಯೋಗ ಸೃಷ್ಟಿ ಮತ್ತು ಸಾಮಾಜಿಕ ನ್ಯಾಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿರುವ ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಸಾಕಷ್ಟು ಹಿಂದಿವೆ ಎಂದು ನೀತಿ ಆಯೋಗ ತಜ್ಞರ ತಂಡ ಹೇಳಿದೆ. ನೀತಿ ಆಯೋಗದ ಸಾಮಾಜಿಕ ಸೂಚಕದ ಪಟ್ಟಿಯಲ್ಲಿ ಈ ಮೂರು ರಾಜ್ಯಗಳು ಸಾಕಷ್ಟು ಹಿಂದುಳಿದಿವೆ ಎನ್ನಲಾಗಿದೆ.
ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯ ವಲಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಅದ್ಯಯನ ನಡೆಸಲಾಗಿದ್ದು, ಔದ್ಯೋಗಿಕ ಮತ್ತು ಕೈಗಾರಿಕಾ ವಲಯದಲ್ಲಿ ಗುಜರಾತ್ ದಾಹೋದ್ ಜಿಲ್ಲೆ ಅಗ್ರಸ್ಥಾನದಲ್ಲಿದೆ. ಅಂತೆಯೇ ಟಿಆರ್ ಎಸ್ ಸರ್ಕಾರ ವಿರುವ ತೆಲಂಗಾಣ, ತೆಲುಗು ದೇಶಂ ಪಕ್ಷದ ಆಡಳಿತ ಇರುವ ಆಂಧ್ರ ಪ್ರದೇಶ, ಎಐಎಡಿಎಂಕೆ ಆಡಳಿತವಿರುವ ತಮಿಳುನಾಡು ರಾಜ್ಯಗಳು ಕೈಗಾರಿಕಾ ವಲಯದಲ್ಲಿ ಉತ್ತಮ ಅಭಿವೃದ್ಧಿ ಸಾಧಿಸುತ್ತಿವೆ ಎಂದು ಅಧ್ಯಯನದಲ್ಲಿ ಅಭಿಪ್ರಾಯಪಡಲಾಗಿದೆ.
ಶಿಕ್ಷಣ ಮತ್ತು ಆರೋಗ್ಯದಲ್ಲಿ ಗುಜರಾತ್ ನ ದಾಹೋದ್ ಅಗ್ರಸ್ಥಾನದಲ್ಲಿದ್ದು, ಆ ಬಳಿಕದ ಸ್ಥಾನದಲ್ಲಿ ಪಶ್ಚಿಮ ಸಿಕ್ಕಿಂ, ತಮಿಳುನಾಡಿನ ರಾಮನಾಥಪುರಂ, ಆಂಧ್ರ ಪ್ರದೇಶದ ವಿಜಯನಗರಂ ಮತ್ತು ವೈಎಸ್ ಆರ್ ಗಳು ಟಾಪ್ 5 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಉಳಿದಂತೆ ಉಗ್ರ ಪೀಡಿತ ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಪಟ್ಟಿಯಲ್ಲಿ ಕಟ್ಟಕಡೆಯ ಸ್ಥಾನ ಪಡೆದುಕೊಂಡಿದೆ. ನೀತಿ ಆಯೋಗ ಪಟ್ಟಿ ಮಾಡಿರುವ ಒಂಭತ್ತು ಅತ್ಯಂತ ಕಡಿಮೆ ಅಭಿವೃದ್ಧಿ ಸಾಧಿಸಿರುವ ಜಿಲ್ಲೆಗಳಲ್ಲಿ ಬಿಜೆಪಿ ಆಡಳಿತ ವಿರುವ ಬಿಹಾರ. ಉತ್ತರ ಪ್ರದೇಶ., ಜಾರ್ಖಂಡ್ ಮತ್ತು ಛತ್ತೀಸ್ ಘಡ ರಾಜ್ಯಗಳ ಜಿಲ್ಲೆಗಳಿವೆ. ಈ ಪೈಕಿ ಬಿಹಾರದ ಬೇಗುಸರೈ, ಬಂಕಾ, ಖಗಾರಿಯಾ ಜಿಲ್ಲೆಗಳನ್ನು ಅತ್ಯಂತ ಕೆಟ್ಟ ಅಭಿವೃದ್ಧಿ ಜಿಲ್ಲೆಗಳು ಎಂದು ಗುರುತಿಸಲಾಗಿದೆ. ಬಿಹಾರದಲ್ಲಿ 13 ವರ್ಷಗಳ ಕಾಲ ಜೆಡಿಯು ಪಕ್ಷದ ನಿತೀಶ್ ಕುಮಾರ್ ನೇತೃತ್ವದ ಸರ್ಕಾರದಲ್ಲಿ ಬಿಜೆಪಿ ಪಾಲುದಾರ ಪಕ್ಷವಾಗಿದೆ.
ಅಂತೆಯೇ ಜಾರ್ಖಂಡ್ ನ ಸಿಮ್ ದೆಗಾ, ರಾಂಚಿ ಕೂಡ ಪಟ್ಟಿಯ ಕಟ್ಟಕಡೆಯ ಸ್ಥಾನದಲ್ಲಿವೆ. ಅಂತೆಯೇ ಛತ್ತೀಸ್ ಘಡದಲ್ಲಿ ಬಿಜೆಪಿ 14 ವರ್ಷಗಳ ಕಾಲ ಅಧಿಕಾರದಲ್ಲಿತ್ತು. ಛತ್ತೀಸ್ ಘಡದ ನಕ್ಲಸ್ ಪೀಡಿತ ಪ್ರದೇಶಗಳಾದ ಸುಕ್ಮಾ, ಕಳಪೆ ಅಭಿವೃದ್ಧಿಯ ಟಾಪ್ 10 ಜಿಲ್ಲೆಗಳ ಪಟ್ಟಿಯಲ್ಲಿದೆ. ಇಲ್ಲಿನ ರಾಜ್ಯ ಸರ್ಕಾರಗಳು ಶಿಕ್ಷಣ ಮತ್ತು ಆರೋಗ್ಯ ವಲಯದಲ್ಲಿನ ಕೊರತೆಗಳನ್ನು ನೀಗಿಸಲು ಕೈಗೊಂಡ ಕ್ರಮಗಳು ಸಮಾಧಾನಕರವಾಗಿಲ್ಲ ಎಂದು ಅಧ್ಯಯನದಲ್ಲಿ ಅಭಿಪ್ರಾಯಪಡಲಾಗಿದೆ.
ಉಳಿದಂತೆ ಈ ಹಿಂದೆ ಆರೋಗ್ಯ ವಲಯದ ಅಭಿವೃದ್ಧಿಯಸಲ್ಲಿ 100ನೇ ಸ್ಥಾನ ಪಡೆದಿದ್ದ ತೆಲಂಗಾಣ ರಾಜ್ಯದ ಭೂಪಾಲಪಲ್ಲಿ, ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ. ಇಲ್ಲಿ ಮಕ್ಕಳು ಅಪೌಷ್ಟಿಕತೆ ಸಮಸ್ಯೆ ಎದುರಿಸುತ್ತಿದ್ದರು. ಬಳಿಕ ಸರ್ಕಾರ ಕೈಗೊಂಡ ಕೆಲ ಕ್ರಮಗಳ ಬಳಿಕ ಇಲ್ಲಿ ಚೇತರಿಕೆ ಕಂಡುಬಂದಿದೆ.