ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರರು ದಾಳಿ ನಡೆಸಿದ್ದು, ಈ ವೇಳೆ ಸೇನೆ ನಡೆಸಿದ ಪ್ರತಿದಾಳಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ.
ದಕ್ಷಿಣ ಶೋಪಿಯಾನ್ ಜಿಲ್ಲೆಯ ಕುಗ್ರಾಮವೊಂದರಲ್ಲಿ ನಿನ್ನೆ ರಾತ್ರಿ ನಡೆದ ಎನ್ ಕೌಂಟರ್ ನಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಇದೀಗ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದಿದ್ದ ಗುಂಡಿನ ಕಾಳಗದಲ್ಲಿ ಮೃತಪಟ್ಟವರ ಸಂಖ್ಯೆ ಇದೀಗ ಆರಕ್ಕೆ ಏರಿದೆ. ಘಟನಾ ಸ್ಥಳದಲ್ಲಿ ಇಂದು ಇನ್ನೂ ಒಂದು ಶವ ಪತ್ತೆಯಾಗಿದ್ದು, ಹತರಾದವರಲ್ಲಿ ಇಬ್ಬರು ಎಲ್ ಇ ಟಿ ಉಗ್ರರು ಮತ್ತು ಇತರರು ನಾಲ್ವರು ಎಂದು ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಗುಂಡೇಟಿನಿಂದ ಸಾವಿಗೀಡಾಗಿದ್ದ ಉಗ್ರ ಗುರುತು ಪತ್ತೆಯಾಗಿದ್ದು, ಈತ ಲಷ್ಕರ್ ಇ ತೊಯ್ಬಾ ಸಂಘಟನೆಯ ಉಗ್ರ ಆಶಿಕ್ ಹಸೇನ್ ಭಟ್ ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ ಸೇನೆಯ 44ನೇ ರಾಷ್ಟ್ರೀಯ ರೈಫಲ್ ಪಡೆ ಮತ್ತು ಉಗ್ರರ ನಡುವೆ ಪಹನೂ ಪ್ರದೇಶದಿಂದ ಸುಮಾರು ಹತ್ತು ಕಿ.ಮೀ. ದೂರದ ಸೈದಾಪೋರಾದಲ್ಲಿನ ಆ್ಯಪಲ್ ತೋಟವೊಂದರಲ್ಲಿ ಭಾನುವಾರ ರಾತ್ರಿ ಗುಂಡಿನ ದಾಳಿ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಪತ್ತೆಯಾದ ಹತ ಉಗ್ರನನ್ನು ಶೋಪಿಯಾನ್ನ ಜಾಮ್ನಗರೀ ಗ್ರಾಮದ ನಿವಾಸಿಯಾಗಿರುವ ಶಾಹೀದ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದೆ. ಸೇನೆಯ ಗುಂಡಿಗೆ ಬಲಿಯಾದ ಪೌರರನ್ನು ಇನ್ನಷ್ಟೇ ಗುರುತಿಸಬೇಕಾಗಿದೆ.