ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಮೆಹುಲ್ ಚೋಕ್ಸಿ ಕಡೆಗೂ ಮೌನ ಮುರಿದಿದ್ದಾರೆ.
ಬ್ಯಾಂಕ್ ವಂಚನೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಭಾರತೀಯ ತನಿಖಾ ಏಜನ್ಸಿಗಳನ್ನು ಚೋಕ್ಸಿ ತೀವ್ರವಾಗಿ ಟೀಕಿಸಿ ಪತ್ರ ಬರೆದಿದ್ದಾರೆ. ಸಿಬಿಐ ಗೆ ಪತ್ರ ಬರೆದಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಪ್ರಕರಣದ ತನಿಖೆ ನಡೆಸುತ್ತಿರುವ ಸಂಸ್ಥೆಗಳು ತಮ್ಮ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿದೆ, ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡುತ್ತಿದೆ ಹಾಗೂ ಭಾರತದಲ್ಲಿನ ನಮ್ಮೆಲ್ಲಾ ವ್ಯವಹಾರ ಶಾಖೆಗಳನ್ನು ಮುಚ್ಚುತ್ತಿದೆ, ಇದು ನಮ್ಮ ಮೇಲೆ ತನಿಖಾಧಿಕಾರಿಗಳಿಗಿರುವ ಪೂರ್ವಾಗ್ರಹವನ್ನು ತೋರಿಸಿದೆ ಎಂದು ದೂರಿದ್ದಾರೆ.
ರಾಯ್ಟರ್ಸ್ ಬಿಡುಗಡೆಗೊಳಿಸಿದ್ದ ಮಾ.7ರ ದಿನಾಂಕವಿರುವ ಈ ಪತ್ರದಲ್ಲಿ ತನಿಖಾ ಸಂಸ್ಥೆಗಳು ಪೂರ್ವ ನಿರ್ಧಾರಿತ ಮನಸ್ಥಿತಿಯೊಡನೆ ತನಿಖೆ ನಡೆಸುತ್ತಿದೆ. ನ್ಯಾಯವಾದ ತನಿಖೆ ನಡೆಯುತ್ತಿಲ್ಲ ಎಂದು ಆರೋಪಿಸಲಾಗಿದೆ.
ದೇಶದಲ್ಲಿಯೇ ದೊಡ್ಡ ಬ್ಯಾಂಕಿಂಗ್ ವಂಚನೆ ಪ್ರಕರಣ ಎನ್ನಲಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ವಜ್ರದ ವ್ಯಾಪಾರಿ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಪ್ರಮುಖ ಆರೋಪಿಗಳಗಿದ್ದಾರೆ. ಇದೇ ವೇಳೆ ಪಿಎನ್ಬಿಯ ಇಬ್ಬರು ಅಧಿಕಾರಿಗಳು ಸಹ ವಂಚನೆಯಲ್ಲಿ ಶಾಮೀಲಾಗಿದ್ದಾರೆಂದು ತನಿಖಾ ಸಂಸ್ಥೆಗಳು ಹೇಳುತ್ತಿದೆ. ಆದರೆ ನೀರವ್ ಮೋದಿ, ಚೋಕ್ಸಿ ಮತ್ತು ಬ್ಯಾಂಕ್ ಅಧಿಕಾರಿಗಳೆಲ್ಲರೂ ನಾವು ಈ ವಂಚನೆ ನಡೆಸಿಲ್ಲ. ನಾವೆಲ್ಲ ಪ್ರಾಮಾಣಿಕರು ಎನ್ನುತ್ತಿದ್ದಾರೆ.
ಇದೀಗ ಚೋಕ್ಸಿ ತನಿಖಾ ಸಂಸ್ಥೆಗಳ ವಿರುದ್ಧವೇ ಆರೋಪ ಮಾಡಿದ್ದು ಇದಕ್ಕೆ ಸಿಬಿಐ ಅಧಿಕಾರಿಗಳು ತಕ್ಷಣಕ್ಕೆ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ.