ಕೇಂದ್ರ ಸಂಪುಟಕ್ಕೆ ಇಬ್ಬರು ಟಿಡಿಪಿ ಸಚಿವರ ರಾಜೀನಾಮೆ; ಎನ್ಡಿಎ ಭಾಗವಾಗಿ ಉಳಿಯಲು ನಿರ್ಧಾರ
ನವದೆಹಲಿ: ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೂಚನೆ ಮೇರೆಗೆ ಕೇಂದ್ರದ ಇಬ್ಬರು ಟಿಡಿಪಿ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನ ಮಾನ ನೀಡುವ ಕುರಿತು ಕೇಂದ್ರ ಸರ್ಕಾರ ನಿರಾಸಕ್ತಿ ತಾಳಿದ ಕಾರಣ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಸೂಚನೆಯಂತೆ ಟಿಡಿಪಿ ಮಂತ್ರಿಗಳಾದ ಅಶೋಕ್ ಗಜಪತಿ ರಾಜು ಮತ್ತು ವೈ ಎಸ್ ಚೌಧರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದ್ದಾರೆ.
ಇದಕ್ಕೂ ಮುನ್ನ ಪ್ರಧಾನಿ ಮೋದಿ ಹಾಗೂ ಚಂದ್ರಬಾಬು ನಾಯ್ಡು ಮಾತುಕತೆ ನಡೆಸಿದ್ದರು.
ಗುರುವಾರ ಬೆಳಗ್ಗೆ ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ಸಚಿವರಾಗಿದ್ದ ಬಿಜೆಪಿಯ ಡಾ.ಕಾಮಿಮೇನಿ ಶ್ರೀನಿವಾಸ್ ಹಾಗೂ ಪಿಡಿಕೊಂಡಲ ಮಾಣಿಕ್ಯಲ ರಾವ್ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
"ಬಿಜೆಪಿ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇವರು ತಮ್ಮ ಖಾತೆಗಳಲ್ಲಿ ಇದ್ದಷ್ಟು ಕಾಲ ಒಳ್ಳೆಯ ಕಾರ್ಯಗಳನ್ನು ಮಾಡಿದ್ದಾರೆ. ರಾಜ್ಯದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಅವರು ತಮ್ಮ ಇಲಾಖೆಗಳಲ್ಲಿ ಗಣನೀಯ ಸುಧಾರಣೆ ತಂದಿದ್ದಾರೆ. ಅವರ ಸೇವೆಗಳಿಗಾಗಿ ನಾನು ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ" ನಾಯ್ಡು ಹೇಳಿಕೆ ನೀಡಿದ್ದರು
"ನಾವು ತಮ್ಮ ಸಚಿವ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದೇವೆ. ಆದರೆ ನಮ್ಮ ಪಕ್ಷವು ಆಡಳಿತಾರೂಢ ಎನ್ ಡಿಎ ಮೈತ್ರಿಕೂಟದ ಭಾಗವಾಗಿಯೇ ಮುಂದುವರಿಯಲಿದೆ" ಎಂದು ಟಿಡಿಪಿ ಸಂಸದ ಅಶೋಕ್ ಗಜಪತಿ ರಾಜು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಇಬ್ಬರೂ ಸಚಿವರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದಾರೆ.
"ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನದ ವಿಚಾರವೆನ್ನುವುದು ನಮ್ಮ ರಾಜ್ಯಕ್ಕೆ ಅತ್ಯಂತ ಮಹತ್ವದ, ಭಾವನಾತ್ಮಕ ವಿಚಾರವಾಗಿದೆ. ಆದರೆ ಕೇಂದ್ರ ಸರ್ಕಾರ ಅದನ್ನು ಗಮನಿಸಲಿಲ್ಲ. ಇದೀಗ ನಮಗೆ ಕೊಡಲಾಗುತ್ತಿರುವ ವಿಶೇಷ ಪ್ಯಾಕೇಜ್ ಸಹ ಸಾಲುತ್ತಿಲ್ಲ" ಟಿಡಿಪಿಯ ಇನ್ನೋರ್ವ ಸಂಸದ ಚೌಧರಿ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos