ನಾಡಧ್ವಜ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ
ನವದೆಹಲಿ: ವಿಶೇಷ ಸ್ಥಾನಮಾನ ಹೊಂದಿರುವ ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿ ಇತರೆ ರಾಜ್ಯಗಳು ಪ್ರತ್ಯೇಕ ನಾಡ ಧ್ವಜ ಹೊಂದುವ ಕುರಿತು ಸಂವಿಧಾನದಲ್ಲಿ ಯಾವುದೇ ವಿರೋಧವೂ ಇಲ್ಲ ಮತ್ತು ಅವಕಾಶವೂ ಇಲ್ಲ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
ನಿನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಕನ್ನಡನಾಡಿನ ನಾಡಧ್ವಜವನ್ನು ಅನಾವರಣಗೊಳಿಸಿದ್ದಾರೆ. ಅಲ್ಲದೆ ಅನುಮತಿಗಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಭಾರತದ ಧ್ವಜ ಕೋಡ್(flag code of India) ಮತ್ತು ಭಾರತದ ರಾಜ್ಯ ಲಾಂಛನ(State Emblem of India) ಕಾಯ್ದೆಯಲ್ಲಿ ಕೇವಲ ರಾಷ್ಟ್ರ ಧ್ವಜದ ಬಗ್ಗೆ ಮಾತ್ರ ಪ್ರಸ್ತಾಪಿಸಲಾಗಿದೆ. ಇತರೆ ಧ್ವಜಗಳ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ. ರಾಜ್ಯಗಳು ಪ್ರತ್ಯೇಕ ಧ್ವಜವನ್ನು ಹೊಂದಬಾರದು ಎಂದು ಸಹ ಹೇಳಿಲ್ಲ.
ಜಮ್ಮು ಮತ್ತು ಕಾಶ್ಮೀರ ಸಂವಿಧಾನದ 370ನೇ ವಿಧಿಯ ಪ್ರಕಾರ ವಿಶೇಷ ಸ್ಥಾನಮಾನ ಹೊಂದಿರುವುದರಿಂದ ಆ ರಾಜ್ಯ ಪ್ರತ್ಯೇಕ ಧ್ವಜ ಹೊಂದಿದೆ ಎಂದು ಹೆಸರು ಹೇಳಲು ಇಚ್ಛಿಸಿದ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ ಅಧಿಕೃತವಾಗಿ ಒಂದೇ ರಾಷ್ಟ್ರಧ್ವಜ ಹೊಂದಿದೆ. ನಾಳೆ ರಾಜ್ಯಗಳು, ಜಿಲ್ಲೆಗಳು ಮತ್ತು ಹಳ್ಳಿಗಳು ಸಹ ಪ್ರತ್ಯೇಕ ಧ್ವಜ ಕೇಳಬಹುದು ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.
Flag code of India ಪ್ರಕಾರ ಭಾರತದ ತ್ರಿವರ್ಣ ಧ್ವಜಕ್ಕೆ ಮೊದಲ ಸ್ಥಾನ, ಅಂದರೆ ಭಾರತ ಒಕ್ಕೂಟದ ಧ್ವಜ ಬೇರೆಲ್ಲಾ ಧ್ವಜಗಳಿಗಿಂತಲೂ ಮೇಲೆ ಹಾರಾಡಬೇಕಿದೆ.
ಕರ್ನಾಟಕ ಸಹ ಪ್ರತ್ಯೇಕ ಧ್ವಜವನ್ನು ಹೊಂದಲು ಸಂಪೂರ್ಣ ಸ್ವತಂತ್ರವಿದ್ದು, ರಾಜ್ಯ ತನ್ನದೇ ಧ್ವಜ ಹೊಂದಿದ ಮಾತ್ರಕ್ಕೆ ಏಕತೆಗೆ ಧಕ್ಕೆಯಾಗುವುದು ಎನ್ನುವುದರಲ್ಲಿ ಯಾವುದೇ ಹುರುಳಿಲ್ಲ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos