ಲಖನೌ: ದೇಶಾದ್ಯಂತ ಭುಗಿಲೆದ್ದಿರುವ ಪ್ರತಿಮೆ 'ವಿಧ್ವಂಸ ವಿಕೃತಿ' ಮುಂದುವರೆದಿದ್ದು. ಲೆನಿನ್, ಪೆರಿಯಾರ್, ಗಾಂಧಿ, ಅಂಬೇಡ್ಕರ್ ಬಳಿಕ ಇದೀಗ ಆಂಜನೇಯ ಸ್ವಾಮಿ ವಿಗ್ರಹದ ಮೇಲೂ ದುಷ್ಕರ್ಮಿಗಳು ತಮ್ಮ ವಿಕೃತಿ ಮುಂದುವರೆಸಿದ್ದಾರೆ.
ಉತ್ತರ ಪ್ರದೇಶದ ಖರುಯಾವ್ ಎಂಬ ಹೋಬಳಿಯಲ್ಲಿ ಆಂಜನೇಯ ದೇವರ ಪ್ರತಿಮೆಯೊಂದನ್ನು ಕಿಡಿಗೇಡಿಗಳು ಭಗ್ನಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. ಆಂಜನೇಯ ಪ್ರತಿಮೆ ಧ್ವಂಸ ಕುರಿತಂತೆ, ಮಾಹಿತಿ ನೀಡಿರುವ ನಗ್ರಾ ಹಳ್ಳಿಯ ಸ್ಟೇಷನ್ ಹೌಸ್ ಅಧಿಕಾರಿ ರಾಮ್ ದಿನೇಶ್ ತಿವಾರಿ, ಬುಧವಾರ ಹನುಮಾನ್ ವಿಗ್ರಹ ಧ್ವಂಸ ಮಾಡಲಾಗಿದೆ. ಈ ಬಗ್ಗೆ ದುಷ್ಯಂತ್ ಸಿಂಗ್ ಎಂಬುವರು ದೂರು ದಾಖಲಿಸಿದ್ದಾರೆ. ಪ್ರಕರಣದ ತನಿಖೆ ನಡೆಸಲಾಗಿದ್ದು, ಯಾರನ್ನೂ ಬಂಧಿಸಲಾಗಿಲ್ಲ ಎಂದಿದ್ದಾರೆ.
ಉತ್ತರ ಪ್ರದೇಶದ ಮೀರತ್ನಲ್ಲಿ ಬುಧವಾರ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ವಿರೂಪಗೊಳಿಸಿದ್ದನ್ನು ಖಂಡಿಸಿ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈ ಹಿನ್ನೆಲೆಯಲ್ಲಿ, ಸಿಎಂ ಯೋಗಿ ಆದಿತ್ಯನಾಥ್, ಗುರುವಾರ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಇಂಥ ಘಟನೆಗಳು ಮರುಕಳಿಸದಂತೆ ಕಟ್ಟೆಚ್ಚರ ವಹಿಸಲು ಸೂಚಿಸಿದ್ದಾರೆ. ಇದಕ್ಕೂ ಮೊದಲು ಸೋಮವಾರ ತ್ರಿಪುರಾದಲ್ಲಿ ಕಮ್ಯೂನಿಸ್ಟ್ ನಾಯಕ ಲೆನಿನ್ ಅವರ ಎರಡು ಪ್ರತಿಮೆಗಳು ಧ್ವಂಸಗೊಂಡ ನಂತರ, ತಮಿಳುನಾಡಿನಲ್ಲಿ ಸಾಮಾಜಿಕ ಹೋರಾಟಗಾರ ಪೆರಿಯಾರ್, ಕೋಲ್ಕತಾದಲ್ಲಿ ಜನ ಸಂಘ ಸಂಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ಹಾಗೂ ಮೀರತ್ನಲ್ಲಿ ಅಂಬೇಡ್ಕರ್ ಪ್ರತಿಮೆ ಧ್ವಂಸಗೊಂಡಿದ್ದವು.
ಇವಿಷ್ಟೇ ಅಲ್ಲಾ ಕೇರಳದ ಕಣ್ಣೂರು ಜಿಲ್ಲೆಯ ತಲಿಪಾರಂಬ ಪಟ್ಟಮದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯನ್ನು ಕಿಡಿಗೇಡಿಗಳು ವಿರೂಪ ಗೊಳಿಸಿದ್ದರು. ಪ್ರತಿಮೆಯ ಕನ್ನಡಕ ಭಗ್ನಗೊಳಿಸಿ, ಪ್ರತಿಮೆಗೆ ಹಾಕಿದ್ದ ಹಾರವನ್ನೂ ಕಿತ್ತೂಗೆಯಲಾಗಿತ್ತು. ಸಿಸಿಟಿವಿ ವಿಡಿಯೋ ಪ್ರಕಾರ, ಒಬ್ಬನೇ ವ್ಯಕ್ತಿ ಈ ಕೃತ್ಯ ನಡೆಸಿರುವುದು ಪತ್ತೆಯಾಗಿದ್ದು ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇತ್ತ ಚೆನ್ನೈನ ತಿರುವಟ್ರಿಯೂರ್ನಲ್ಲಿ ಸ್ಥಾಪಿಸಲಾಗಿದ್ದ ಅಂಬೇಡ್ಕರ್ ಪ್ರತಿಮೆಗೆ ಕಿಡಿಗೇಡಿಗಳು ಬಣ್ಣ ಎರಚಿ ಅಪಮಾನ ಮಾಡಿದ್ದಾರೆ. ಇಲ್ಲಿನ ಜನವಸತಿ ಪ್ರದೇಶದಲ್ಲಿ ಇರಿಸಲಾಗಿದ್ದ ಈ ಪ್ರತಿಮೆಗೆ ಮೊದಲೇ ಗ್ರಿಲ್ ಅಳವಡಿಸಲಾಗಿತ್ತು. ಹಾಗಾಗಿ, ಮೂರ್ತಿ ಭಗ್ನಗೊಳಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ, ಕಿಡಿಗೇಡಿಗಳು ಬಣ್ಣ ಎರಚಿದ್ದರು. ವಿಷಯ ಹರಡುತ್ತಲೇ, ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos