ಸೂರತ್ (ಗುಜರಾತ್): ಹತ್ತನೇ ತರಗತಿ ಪರೀಕ್ಷೆಗಳು ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿರುತ್ತದೆ. ಆ ಸಮಯದಲ್ಲಿ ಪೋಷಕರು ಸಹ ತಮ್ಮ ಮಕ್ಕಳಿಗೆ ಯಾವ ತೊಂದರೆಯಾಗದಂತೆ, ಅವರು ಓದುವುದಕ್ಕೆ ಅನುಕೂಲ ಕಲ್ಪಿಸಿಕೊಡುತ್ತಾರೆ.
ಆದರೆ ಗುಜರಾತ್ ಸೂರತ್ ನಲ್ಲಿನ ವಿದ್ಯಾರ್ಥಿಯೊಬ್ಬನ ಬಾಳಿನಲ್ಲಿ ಪರೀಕ್ಷೆ ವೇಳೆಯಲ್ಲೇ ಅನಿರೀಕ್ಷಿತ ಆಘಾತ ಬಂದೆರಗಿತ್ತು. ಹರೀಶ್ ಮನೋಹರ್ ಹತ್ತನೇ ತರಗತಿ ಪರೀಕ್ಷೆ ಬರೆಯಬೇಕಿತ್ತು. ಆದರೆ ಅದೇ ವೇಳೆ ಆತನ ತಂದೆ ರಾಜ್ಕುಮಾರ್ಗೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದರು.
ಅಪ್ಪನ ಸಾವಿನ ಸುದ್ದಿ ಹರಿಶ್ ಗೆ ಅಪಾರ ದುಃಖ ತಂದಿತ್ತಾದರೂ ಅಂದಿನ ಪರೀಕ್ಷೆಗೆ ಅವನು ಗೈರಾಗಲಿಲ್ಲ. ಆತ ತಾನು ಪರೀಕ್ಷೆ ಬರೆದು ಬಂದ ಬಳಿಕ ತಂದೆಯ ಅಂತಿಮ ಸಂಸ್ಕಾರದ ವಿಧಿಗಳನ್ನು ಪೂರೈಸಿದ್ದಾನೆ.
ತಂದೆ ಸಾವಿನಿಂದ ಮನನೊಂದಿದ್ದ ಹರೀಶ್ ಗೆ ಅವನ ನೆರೆಮನೆಯಲ್ಲಿ ವಾಸವಿದ್ದ ಕೃಷ್ಣಾಕುಂಜ್ ಪರೀಕ್ಷೆ ಬರೆದು ಬರುವಂತೆ ಹೇಳಿದ್ದಾರೆ. ಅದರಂತೆ ಅವನು ಬೋರ್ಡ್ ಪರೀಕ್ಷೆ ಬರೆದು ಬಂದಿದ್ದಾನೆ. ಆದರೆ ಪರೀಕ್ಷೆ ಮುಗಿಯಲು ಹತ್ತು ನಿಮಿಷ ಇರುವಾಗ ಹರೀಶ್ಗೆ ದುಃಖ ತಡೆಯಲಾಗಲಿಲ್ಲ, ಪರೀಕ್ಷಾ ಕೊಠಡಿಯಲ್ಲಿಯೇ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಆಗ ಅಲ್ಲಿದ್ದ ಶಿಕ್ಷಕರು ಸಮಧಾನದ ಮಾತು ಹೇಳಿ ಧೈರ್ಯ ತುಂಬಿದ್ದಾರೆ.
ಎಂತಹಾ ದುಃಖದಲ್ಲಿಯೂ ವಿದ್ಯಾರ್ಥಿ ದೆಸೆಯ ಪ್ರಮುಖ ಘಟ್ಟವಾದ ಹತ್ತನೇ ತರಗತಿ ಪರೀಕ್ಷೆ ಬರೆದು ಬಂದ ವಿದ್ಯಾರ್ಥಿಯ ನಡೆ ಎಲ್ಲರೂ ಮೆಚ್ಚುವಂತಹುದು ಎನ್ನುವುದು ಸತ್ಯ.