ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
ನವದೆಹಲಿ: ಇರಾಕ್ ನಲ್ಲಿ 3 ವರ್ಷಗಳ ಹಿಂದೆ ಅಪಹರಣಕ್ಕೊಳಗಾಗಿದ್ದ 39 ಮಂದಿ ಭಾರತೀಯರು ಸಾವನ್ನಪ್ಪಿದ್ದಾರೆಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮಂಗಳವಾರ ಹೇಳಿದ್ದಾರೆ.
ರಾಜ್ಯಸಭೆಯಲ್ಲಿಂದು ಮಾತನಾಡಿರುವ ಅವರು, ಅಪಹಣಕ್ಕೀಡಾಗಿದ್ದ 39 ಭಾರತೀಯರನ್ನು ಇಸ್ಲಾಮಿಕ್ ಸ್ಟೇಟ್ ಆಫ್ ಇರಾನ್ ಆ್ಯಂಡ್ ಇರಾಕ್ (ಇಸಿಸ್) ಉಗ್ರ ಸಂಘಟನೆ ಹತ್ಯೆ ಮಾಡಿದೆ ಎಂದು ಹೇಳಿದ್ದಾರೆ.
ಆಳವಾದ ರಾಡಾರ್ ಗಳನ್ನು ಬಳಸಿ ಹತ್ಯೆಗೀಡಾಗಿರುವ ಭಾರತೀಯ ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ. ಮೃತದೇಹಗಳನ್ನು ಸಾಮೂಹಿಕ ಸಮಾಧಿ ಮಾಡಲಾಗಿದ್ದು, ಡಿಎನ್ಎ ಪರೀಕ್ಷೆ ಮೂಲಕ ಭಾರತೀಯರನ್ನು ಗುರ್ತಿಸಲಾಗಿದೆ.
ಮೃತದೇಹಗಳ ಮಾದರಿಗಳನ್ನು ಡಿಎನ್ಎ ಪರೀಕ್ಷೆಗಾಗಿ ಬಾಗ್ದಾದ್'ಗೆ ಕಳುಹಿಸಲಾಗಿತ್ತು. ಇದರಲ್ಲಿ 38 ಮಂದಿ ಭಾರತೀಯರು ಎಂಬುದು ಖಚಿತಗೊಂಡಿದೆ ಎಂದು ತಿಳಿಸಿದ್ದಾರೆ.
39 ಮಂದಿ ಭಾರತೀಯರು ಟರ್ಕಿ ಮೂಲಕ ನಿರ್ಮಾಣ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇರಾಕ್ ನಲ್ಲಿ ಉಪಟಳ ಹೆಚ್ಚಿಕೊಂಡಿದ್ದ ಇಸಿಸ್ ಉಗ್ರರು, ವಿದೇಶಿ ಪ್ರಜೆಗಳನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು. ವಿವಿಧ ರಾಷ್ಟ್ರಗಳ ಪ್ರಜೆಗಳನ್ನು ಬೇರೆ ಬೇರೆ ನೆಲೆಗಳಲ್ಲಿ ಅಡಗಿಸಿಟ್ಟಿದ್ದರು. ಭಾರತೀಯರ ಜೊತೆಗೆ 51 ಬಾಂಗ್ಲಾದೇಶಿ ಕಾರ್ಮಿಕರನ್ನು ಒತ್ತೆಯಾಗಿರಿಸಿಕೊಂಡಿದ್ದರು.
ಭಾರತೀಯರ ಅಪಹರಣ ಕುರಿತಂತೆ ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ಸುಷ್ಮಾ ಸ್ವರಾಜ್ ಅವರು, ಇರಾಕ್ ನಲ್ಲಿ ನಾಪತ್ತೆಯಾಗಿದ್ದ 39 ಭಾರತೀಯರು ಬಾದುಷ್ ಜೈಲಿನಲ್ಲಿರಬಹುದು. ನಾಪತ್ತೆಯಾಗಿರುವ ಭಾರತೀಯರ ಕುಟುಂಬಸ್ಥರನ್ನು ನಾನು ಈ ಹಿಂದೆ ಕೂಡ ಹಲವು ಬಾರಿ ಭೇಟಿ ಮಾಡಿದ್ದೇನೆ. ಆದರೆ, ಈ ಬಾರಿ ಪರಿಸ್ಥಿತಿ ಬದಲಾಗಿದೆ. ಇಸಿಸ್ ಕಪಿಮುಷ್ಟಿಯಿಂದ ಮೊಸುಲ್ ಸ್ವತಂತ್ರಗೊಂಡಿದೆ ಎಂದು ಈ ಹಿಂದೆ ಇರಾಕ್ ಪ್ರಧಾನಿ ಮಂತ್ರಿ ಘೋಷಣೆ ಮಾಡಿದ್ದರು. ಈ ಘೋಷಣೆ ಬಳಿಕ ಇರಾಕ್ ಭೇಟಿ ನೀಡುವಂತೆ ವಿ.ಕೆ.ಸಿಂಗ್ ಅವರಿಗೆ ಸೂಚನೆ ನೀಡಿದ್ದೆ. ಆದರೆ, ಈಗಲೂ ಇರಾಕ್'ನ ಪಶ್ಚಿಮ ಮೊಸುಲ್ ನಲ್ಲಿ ಹೋರಾಟಗಳು ಮುಂದುವರೆಯುತ್ತಿದೆ ಎಂದು ಹೇಳಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos