ನವದೆಹಲಿ: ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹತ್ವದ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ಭಷ್ಟಾಚಾರಾ ಆರೋಪ ಎದುರಿಸುತ್ತಿರುವ ಅಧಿಕಾರಿಗಳಿಗೆ ಪಾಸ್ ಪೋರ್ಟ್ ನೀಡದಿರಲು ನಿರ್ಧರಿಸಿದೆ ಎನ್ನಲಾಗಿದೆ.
ಈ ಬಗ್ಗೆ ಕೇಂದ್ರ ಸಿಬಂದಿ ಮತ್ತು ತರಬೇತಿ ಸಚಿವಾಲಯ ನಿಯಮಾವಳಿಯೊಂದನ್ನು ಅಂತಿಮಗೊಳಿಸಿದ್ದು, ಇದರಲ್ಲಿ ಅಪರಾಧ ಪ್ರಕರಣ ಅಥವಾ ಭ್ರಷ್ಟಾಚಾರ ಪ್ರಕರಣ ಎದುರಿಸುತ್ತಿರುವ ಅಧಿಕಾರಿಗಳಿಗೆ ಇನ್ನು ಮುಂದೆ ಪಾಸ್ಪೋರ್ಟ್ ನೀಡದಿರುವ ಸಂಬಂಧ ಅಂತಿಮಗೊಳಿಸಿರುವ ಹೊಸ ನಿಯಮಾವಳಿಯಲ್ಲಿ ಸೇರಿಸಲಾಗಿದೆ. ಆದರೆ, ತುರ್ತು ವೈದ್ಯಕೀಯ ಸನ್ನಿವೇಶದಲ್ಲಿ ವಿದೇಶಕ್ಕೆ ತೆರಳಬೇಕಾದ ಅನಿವಾರ್ಯ ಎದುರಾದಾಗ ಮಾತ್ರವೇ ವಿಶೇಷ ವಿನಾಯಿತಿ ನೀಡಲಾಗುತ್ತದೆ ಎನ್ನಲಾಗಿದೆ.
ಭ್ರಷ್ಟಾಚಾರ ಪ್ರಕರಣದಲ್ಲಿ ಸಿಕ್ಕಿಬಿದ್ದರೆ, ತನಿಖೆ ನಡೆಯುತ್ತಿದ್ದರೆ ಅಥವಾ ಯಾವುದೇ ಸರ್ಕಾರಿ ಸಂಸ್ಥೆಯಿಂದ ಅಧಿಕಾರಿಯ ವಿರುದ್ಧ ಎಫ್ ಐಆರ್ ದಾಖಲಾಗಿದ್ದರೆ ಮತ್ತು ಅಧಿಕಾರಿಯನ್ನು ಅಮಾನತಿನಲ್ಲಿರಿಸಿದ್ದರೆ ಪಾಸ್ಪೋರ್ಟ್ ನೀಡಿಕೆ ತಿರಸ್ಕರಿಸಲಾಗುತ್ತದೆ. ಅಲ್ಲದೆ ಅಪರಾಧ ಪ್ರಕರಣಗಳು ವಿಚಾರಣೆಯಲ್ಲಿದ್ದರೂ ಈ ನಿಯಮ ಅನ್ವಯವಾಗುತ್ತದೆ. ಕೇವಲ ಎಫ್ ಐಆರ್ ದಾಖಲಾಗಿ, ಚಾರ್ಜ್ಶೀಟ್ ದಾಖಲಾಗಿಲ್ಲದಿದ್ದರೆ ಅಂಥವರಿಗೆ ಪಾಸ್ ಪೋರ್ಟ್ ನಿರಾಕರಿಸುವಂತಿಲ್ಲ ಎನ್ನಲಾಗಿದೆ.
ಅಂತೆಯೇ ಎಫ್ಐಆರ್ ನ ವಿವರಣೆಯನ್ನು ಪಾಸ್ಪೋರ್ಟ್ ಕಚೇರಿಗೆ ನೀಡಲಾಗುತ್ತದೆ. ಆದರೆ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ಪಾಸ್ಪೋರ್ಟ್ ಕಚೇರಿಗೆ ಬಿಡಲಾಗುತ್ತದೆ. ಅಧಿಕಾರಿಯ ಸಂಬಂಧಿಕರು ಅಥವಾ ಸ್ವತಃ ಅಧಿಕಾರಿಯು ಆರೋಗ್ಯ ಸಮಸ್ಯೆ ಹೊಂದಿದ್ದು, ವಿದೇಶಕ್ಕೆ ತೆರಳಬೇಕಿದ್ದರೆ ಆಗ ಪಾಸ್ಪೋರ್ಟ್ ನೀಡಲಾಗುತ್ತದೆ. ಅಂತೆಯೇ ಈ ಅನುಮತಿ ಕೂಡ ಪ್ರಕರಣದಿಂದ ಪ್ರಕರಣಕ್ಕೆ ಭಿನ್ನವಾಗಿರುತ್ತದೆ ಎಂದು ತಿಳಿದುಬಂದಿದೆ.