ದೆಹಲಿಗೆ ಅಪ್ಪಳಿಸಿದ ಚಂಡಮಾರುತ
ನವದೆಹಲಿ: ನಿರೀಕ್ಷೆಯಂತೆಯೇ ರಾಜಧಾನಿ ದೆಹಲಿಗೆ ಚಂಡಮಾರುತ ಅಪ್ಪಳಿಸಿದ್ದು, ಬರೊಬ್ಬರಿ 20 ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ನಿನ್ನೆ ರಾತ್ರಿ ವೇಳೆಗೆ ಚಂಡಮಾರುತ ದೆಹಲಿಗೆ ಅಪ್ಪಳಿಸಿದ್ದು, ಗುಡುಗು ಮಿಂಚು, ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ ಎಂದು ತಿಳಿದುಬಂದಿದೆ. ದೆಹಲಿ ಮಾತ್ರವಲ್ಲದೇ ಚಂಡೀಘಡ, ಉತ್ತರಾಖಂಡದಲ್ಲೂ ಭಾರಿ ಮಳೆಯಾಗಿದೆ ಎಂದು ತಿಳಿದುಬಂದಿದೆ. ಇನ್ನು ಉತ್ತರಾಖಂಡದಲ್ಲಿ ಮಳೆಯಿಂದಾಗಿ ಇಬ್ಬರು ಯಾತ್ರಿಗಳು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇತ್ತ ದೆಹಲಿಯಲ್ಲಿ ಚಂಡಮಾರುತದಿಂದಾಗಿ ದೆಹಲಿ ಮೆಟ್ರೋ ಸಂಚಾರ ತೀವ್ರ ಅಸ್ತವ್ಯಸ್ಥವಾಗಿದ್ದು, ತೀವ್ರ ಕಟ್ಟೆಚ್ಚರದ ನಡುವೆ ರೈಲು ಸಂಚಾರ ನಡೆಸುವಂತೆ ಎಚ್ಚರಿಕೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ರೈಲಿನ ವೇಗ ಪ್ರತೀ ಗಂಟೆಗೆ 15 ಕಿ.ಮೀಗೂ ಹೆಚ್ಚಾಗದಂತೆ ರೈಲಿನ ಪೈಲಟ್ ಗಳಿಗೆ ಸೂಚನೆ ನೀಡಲಾಗಿದೆ. ಇನ್ನು ಚಂಡಮಾರುತದಿಂದಾಗಿ ದೆಹಲಿಯ ಬಹುತೇಕ ನಿಲ್ದಾಣಗಳಲ್ಲಿ ಮೆಟ್ರೋ ರೈಲುಗಳು ಸಂಚಾರ ಸ್ಥಗಿತಗೊಳಿಸಿದ್ದವು. ಚಂಡಮಾರುತ ಗಂಟೆಗೆ 90 ವೇಗದಲ್ಲಿ ಬೀಸುತ್ತಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಮೆಟ್ರೋ ರೈಲುಗಳನ್ನು ಸ್ಥಗಿತಗೊಳಿಸಲಾಗಿತ್ತು.
ಅತ್ತ ದೆಹಲಿಯಲ್ಲಿ ಚಂಡಮಾರುತ ಅಪ್ಪಳಿಸುತ್ತಿದ್ದಂತೆಯೇ ಇತ್ತ ಹವಾಮಾನ ಇಲಾಖೆ 20 ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದೆ. ಪಂಜಾಬ್, ಹರಿಯಾಣ, ಚಂಡೀಘಡ, ದೆಹಲಿ, ಬಿಹಾರ, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಉತ್ತರ ಪ್ರದೇಶ, ಜಾರ್ಖಂಡ್, ಸಿಕ್ಕಿಂ, ಒಡಿಶಾ, ತೆಲಂಗಾಣ, ಉತ್ತರ ಕರ್ನಾಟಕ, ತಮಿಳುನಾಡು ಮತ್ತು ಕೇರಳಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಉಳಿದಂತೆ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬುಧವಾರದವರೆಗೂ ಈ 20 ರಾಜ್ಯಗಳಲ್ಲಿ ಇದೇ ಪರಿಸ್ಥಿತಿ ಮುಂದುವರೆಯುತ್ತದೆ ಎಂದು ಹವಮಾನ ಇಲಾಖೆ ಸ್ಪಷ್ಟಪಡಿಸಿದೆ. ಕಳೆದ ವಾರ ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿಸಂಭವಿಸಿದ್ದ ಚಂಡಮಾರುತದಿಂದಾಗಿ ಕನಿಷ್ಠ 120 ಮಂದಿ ಸಾವಿಗೀಡಾಗಿ ಹಲವರು ಗಾಯಗೊಂಡಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos