ದೇಶ

ನನಗೆ 'ರಾಮ್ ಗೋಪಾಲ್ ವರ್ಮಾ' ಅವರೇ ಸ್ಪೂರ್ತಿ: ಯುಪಿಎಸ್ ಸಿ ರ್ಯಾಂಕ್ ವಿಜೇತನ ಮನದಾಳದ ಮಾತು

Sumana Upadhyaya

ನವದೆಹಲಿ: ಸತ್ಯ, ಸರ್ಕಾರ್ ನಂತಹ ಯಶಸ್ವಿ ಚಿತ್ರಗಳನ್ನು ನೀಡಿದ ವಿವಾದಿತ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮಗೆ ಸ್ಪೂರ್ತಿ ಎಂದು ಕೇಂದ್ರ ನಾಗರಿಕ ಸೇವಾ ಆಯೋಗ(ಯುಪಿಎಸ್ ಸಿ) ಪರೀಕ್ಷೆಯಲ್ಲಿ ದೇಶಕ್ಕೆ 624ನೇ ರ್ಯಾಂಕ್ ಗಳಿಸಿದ ಯಡವಳ್ಳಿ ಅಕ್ಷಯ್ ಕುಮಾರ್ ಹೇಳಿದ್ದಾರೆ.

ಆಂಧ್ರ ಪ್ರದೇಶ ಮೂಲದ ಯುಪಿಎಸ್ ಸಿ ರ್ಯಾಂಕ್ ವಿಜೇತರಾಗಿರುವ ಅಕ್ಷಯ್ ಕುಮಾರ್ ತೆಲುಗು ಆನ್ ಲೈನ್ ಚಾನೆಲ್ ವೊಂದಕ್ಕೆ ಸಂದರ್ಶನ ನೀಡಿದ್ದ ಸಂದರ್ಭದಲ್ಲಿ ರಾಮ್ ಗೋಪಾಲ್ ವರ್ಮಾ ಅವರನ್ನು ಹೊಗಳಿದ್ದು ಭೂಗತಲೋಕದ ಚಿತ್ರಗಳನ್ನು ಮಾಡುವುದರಲ್ಲಿ ಪ್ರಸಿದ್ಧರಾಗಿರುವ ಅವರು ತಮ್ಮ ಜೀವನಕ್ಕೆ ಸ್ಪೂರ್ತಿ ಎಂದಿದ್ದಾರೆ.

ಸಂದರ್ಶನದ ವಿಡಿಯೊವನ್ನು ಸ್ವತಃ ರಾಮ್ ಗೋಪಾಲ್ ವರ್ಮಾರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಾಮ್ ಗೋಪಾಲ್ ವರ್ಮಾ ಅಂದರೆ ಅಪರಾಧಿ ಮತ್ತು ವಿಕೃತ ಕಾಮಿಗಳಿಗೆ ಸ್ಪೂರ್ತಿ ಎಂದು ಹೇಳುವವರಿಗೆ ಇವರು ಅಪವಾದ ಎಂದು ಟ್ವೀಟ್ ನಲ್ಲಿ ವರ್ಮಾ ಕಾಲೆಳೆದಿದ್ದಾರೆ.

ಇನ್ನೊಂದು ಟ್ಟೀಟ್ ನಲ್ಲಿ ಅವರು ಯಡವಳ್ಳಿ ಅಕ್ಷಯ್ ಕುಮಾರ್ ಅವರನ್ನು ಭೇಟಿ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸಿವಿಲ್ ಎಂಜಿನಿಯರಿಂಗ್ ನಲ್ಲಿ ಅನುತ್ತೀರ್ಣನಾದ ನನ್ನಿಂದ ಅವರು ಹೇಗೆ ಸ್ಪೂರ್ತಿ ತೆಗೆದುಕೊಂಡರು ಎಂದು ತಿಳಿದುಕೊಳ್ಳುವ ಇಚ್ಛೆಯಿದೆ ಎಂದು ವರ್ಮಾ ಹೇಳಿದ್ದಾರೆ.

SCROLL FOR NEXT