ನವದೆಹಲಿ: ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದ್ದ ಎಲ್ಲಾ ಸಾಕ್ಷ್ಯಾಧಾರಗಳು ಹಾಗೂ ದಾಖಲೆಗಳನ್ನು ಯುಪಿಎ ಸರ್ಕಾರ ಹಾಗೂ ಭ್ರಷ್ಟ ಪೊಲೀಸರು ನಾಶಪಡಿಸಿದ್ದಾರೆಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು ಸೋಮವಾರ ಹೇಳಿದ್ದಾರೆ.
ಸುನಂದಾ ಪುಷ್ಕರ್ ಸಾವು ಪ್ರಕರಣ ಸಂಬಂಧ ಚಾರ್ಜ್ ಶೀಟ್ ಸಲ್ಲಿಸಿರುವ ದೆಹಲಿ ಪೊಲೀಸರು, ಚಾರ್ಜ್ ಶೀಟ್ ನಲ್ಲಿ ಶಶಿ ತರೂರ್ ಅವರ ಹೆಸರನ್ನು ಸೇರ್ಪಡೆಗೊಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸುಬ್ರಹ್ಮಣ್ಯನ್ ಸ್ವಾಮಿಯವರು, ಸುನಂದಾ ನಿಗೂಢ ಸಾವು ಪ್ರಕರಣ ಕುರಿತಂತೆ ಇದ್ದ ಎಲ್ಲಾ ಸಾಕ್ಷ್ಯಾಧಾರಗಳು ಹಾಗೂ ದಾಖಲೆಗಳನ್ನು ಅಂದಿನ ಯುಪಿಎ ಸರ್ಕಾರ, ಭ್ರಷ್ಟ ಪೊಲೀಸರು ನಾಶಪಡಿಸಿದ್ದಾರೆ. ಪ್ರಸ್ತುತ ಇರುವ ಸಾಕ್ಷ್ಯಾಧಾರಗಳ ಅನ್ವಯ ಪೊಲೀಸರು ಇದನ್ನಷ್ಟೇ ಮಾಡಬಹುದು. ಶಶಿ ತರೂರ್ ಅವರು ತಮ್ಮ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರಣೆ ನೀಡಿದ್ದರು ಎಂಬ ಆರೋಪಗಳು ಕೇಳಿ ಬಂದಿದ್ದವೆ. ವಿಚಾರಣೆ ವೇಳೆ ಮತ್ತಷ್ಟು ಮಾಹಿತಿಗಳು ಬಹಿರಂಗಗೊಳ್ಳಲಿವೆ ಎಂದು ತಿಳಿಸಿದ್ದಾರೆ.