ಎಸ್ಸಿ / ಎಸ್ಟಿ ಕಾಯಿದೆ ವಿಚಾರ: ಮಾರ್ಚ್ 20ರ ತನ್ನ ತೀರ್ಪನ್ನು ಸಮರ್ಥಿಸಿಕೊಂಡ ಸುಪ್ರೀಂ ಕೋರ್ಟ್
ನವದೆಹಲಿ: ಎಸ್ಸಿ / ಎಸ್ಟಿ ಕಾಯಿದೆಗೆ ಸಂಬಂಧಿಸಿ ತಾನು ನೀಡಿರುವ ಮಾರ್ಚ್ 20ರ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು ಸಮರ್ಥಿಸಿಕೊಂಡಿದೆ.
ನ್ಯಾಯಯುತ ಪ್ರಕ್ರಿಯೆಯಿಲ್ಲದೆ ಸಂಸತ್ತಿಗೆ ಸಹ ವ್ಯಕ್ತಿಯೊಬ್ಬರ ಬಂಧನಕ್ಕೆ ಆದೇಶಿಸುವ ಅಧಿಕಾರವಿಲ್ಲ. ವ್ಯಕ್ತಿಯ ಜೀವನ ಹಾಗೂ ಸ್ವಾತಂತ್ರದ ಹಕ್ಕಿಗೆ ಇದು ವಿರೋಧವಾಗುತ್ತದೆ ಎಂದಿ ಸುಪ್ರೀಂ ಕೋರ್ಟ್ ಹೇಳಿದೆ.
ಸಂಸತ್ತು ಜಾರಿಗೊಳಿಸಿದ ಕಾನೂನು ನಿಬಂಧನೆಗಳನ್ನು ಬದಲಿಸಲು ನ್ಯಾಯಾಲಯಗಳು ಆದೇಶಿಸಬಾರದು ಎಂದ ಕೇಂದ್ರದ ವಾದವನ್ನು ವಿರೋಧಿಸಿದ ನ್ಯಾಯಾಲಯ ಈ ಮೇಲಿನಂತೆ ಹೇಳಿದೆ.ನ್ಯಾಯಮೂರ್ತಿಗಳಾದ ಆದರ್ಶ್ ಗೋಯೆಲ್ ಮತ್ತು ಯು.ಯು. ಲಲಿತ್ ಅವರನ್ನೊಳಗೊಂಡ ಪೀಠವು "ನಾವು ಸರ್ವಾಧಿಕಾರಿಗಳ ಸಮಾಜದಲ್ಲಿಲ್ಲ. ಏಕಪಕ್ಷೀಯ ವಾದವನ್ನಾಲಿಸಿ ಒಬ್ಬ ನಿರಪರಾಧಿಗೆ ಶಿಕ್ಷೆ ವಿಧಿಸುವುದುಅ ಕಾನೂನು ವಿರುದ್ಧವಾಗಲಿದೆ" ಎಂದಿತು.
ಈ ವಿಚಾರಕ್ಕೆ ಸಂಬಂಧಿಸಿ ಎಲ್ಲಾ ಪಕ್ಷಗಳ ವಾದವನ್ನು ವಿವರವಾಗಿ ಕೇಳಿಸಿಕೊಳ್ಳುವುದಾಗಿ ಹೇಳಿದ ನ್ಯಾಯಪೀಠ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಬೇಸಿಗೆ ರಜೆಯ ಬಳಿಒಕದ ಅವಧಿಗೆ ಮುಂದೂಡಿದೆ. ಏತನ್ಮಧ್ಯೆ ವಿಚಾರಣೆ ನಡೆಸುತ್ತಿರುವ ನ್ಯಾಯಪೀಠದ ಸದಸ್ಯರಾದ ನ್ಯಾಯಮೂರ್ತಿ ಗೋಯಲ್ ಅವರು ಜುಲೈ 6, 2018 ರಂದು ನಿವೃತ್ತರಾಗಲಿದ್ದು ನ್ಯಾಯಾಲಯವು ಆ ದಿನದೊಳಗೆ ವಿಚಾರಣೆ ಕೈಗೊಳ್ಳಲಿದೆಯೆ ನೋಡಬೇಕಿದೆ.
ಇದೇ ವೇಳೆ ಸಂವಿಧಾನದ 21ನೇ ಪರಿಚ್ಚೇಧ (ಜೀವನಹಾಗೂ ಸ್ವಾತಂತ್ರದ ಹಕ್ಕು)ದ ಪ್ರತಿ ನಿಬಂಧನೆಯನ್ನೂ ಗಮನದಲ್ಲಿರಿಸಿಕೊಳ್ಳಬೇಕು. ಸಂಸತ್ತು ಸಹ ಈ ಪರಿಚ್ಚೇಧವನ್ನು ವಿರೋಧಿಸಲಿಕ್ಕೆ ಅವಕಾಶವಿಲ್ಲ" ಎಂದು ವಿಚಾರಣೆ ನಡುವೆ ಪೀಠವು ಅಭಿಪ್ರಾಯಪಟ್ಟಿದೆ.
ಕಳೆದ ಮಾರ್ಚ್ 20ರಂದು ಸರ್ವೋಚ್ಚ ನ್ಯಾಯಾಲಯ ಪ್ರಾಮಾಣಿಕ ಸರ್ಕಾರಿ ಅಧಿಕಾರಿಗಳಿಗೆ ತಮ್ಮ ಕರ್ತವ್ಯಗಳನ್ನು ನಿರ್ಭಯದಿಂದ ನಿರ್ವಹಿಸಲು ಮತ್ತು ಬ್ಲಾಕ್ ಮೇಲ್ಗೆ ಗುರಿಯಾಗುವುದನ್ನು ತಪ್ಪಿಸಲು ಎಸ್ಸಿ/ಎಸ್ಟಿ ಕಾಯಿದೆಯ ಕಾಠಿನ್ಯವನ್ನು ಕಡಿಮೆ ಮಾಡುವ ಆದೇಶವನ್ನು ಪ್ರಕಟಿಸಿತ್ತು. ಇದರಿಂದಾಗಿ ಎಸ್ಸಿ/ಎಸ್ಟಿ ಕಾಯಿದೆ ದುರ್ಬಲವಾಯಿತೆಂದು ಭಾವಿಸಿದ ದಲಿತರು ಭಾರತ್ ಬಂದ್ ಕರೆ ನೀಡಿದ್ದರು.