ಕೋಯಿಕ್ಕೋಡ್: ಕೇರಳದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ನಿಫಾಹ್ ವೈರಾಣು ಸೊಂಕಿಗೆ ತುತ್ತಾಗಿ ಬಲಿಯಾಗಿದ್ದ ನರ್ಸ್ ಲಿನಿ ಅವರನ್ನು ಅವರ ಪೋಷಕರ ಆಗಮನಕ್ಕೂ ಕಾಯದೇ ವೈದ್ಯರೇ ಅಂತ್ಯಕ್ರಿಯೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಈ ಎನ್ಐವಿ ವೈರಸ್ ಅಥವಾ ನಿಪಾಹ್ ಸೋಂಕು ತಗುಲಿ ಪೆರೆಮ್ರಾ ತಾಲೂಕು ಆಸ್ಪತ್ರೆಯ ನರ್ಸ್ ಮೃತಪಟ್ಟಿದ್ದರು, ತಮಗೆ ನಿಪಾಹ್ ವೈರಾಣು ಸೋಂಕು ತಗುಲಿದ್ದು, ತಾನು ಸಾಯುತ್ತಿದ್ದೇನೆ ಎಂದು ತಿಳಿಯುತ್ತಿದ್ದಂತೆಯೇ ತನ್ನ ಪತಿ ಮತ್ತು ಕುಟುಂಬಸ್ಥರಿಗೆ ಪತ್ರ ಬರೆದಿರುವ ದಾದಿ ಲಿನಿ, ನಾನು ಬಹುತೇಕ ನನ್ನ ಜೀವನದ ಅಂತಿಮ ಮಾರ್ಗದಲ್ಲಿದ್ದು, ನಿಮ್ಮನ್ನು ಮತ್ತೆ ನೋಡುತ್ತೇನೆ ಎಂದು ನನಗನ್ನಿಸುತ್ತಿಲ್ಲ. ನಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ.. ಅವರನ್ನು ನಿಮ್ಮೊಂದಿಗೆ ಗಲ್ಫ್ ಗೆ ಕರೆದುಕೊಂಡು ಹೋಗಿ..ನನ್ನ ತಂದೆಯಂತೆ ಅವರನ್ನು ಇಲ್ಲಿ ಏಕಾಂಗಿಯಾಗಿ ಬಿಡಬೇಡಿ.. ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಎಂದು ಭಾವುಕರಾಗಿ ಪತ್ರ ಬರೆದಿದ್ದಾರೆ.
ಸೋಂಕು ಹರಡುವ ಭೀತಿಯಿಂದ ಪೋಷಕರ ಆಗಮನಕ್ಕೂ ಕಾಯದೇ ಅಂತ್ಯಕ್ರಿಯೆ
ಇನ್ನು ಮೃತದೇಹವನ್ನು ಮನೆಗೆ ಕೊಂಡೊಯ್ದರೆ ಸೋಂಕು ಹರಡುವ ಸಾಧ್ಯತೆ ಇತ್ತು. ಈ ಬಗ್ಗೆ ವೈಧ್ಯಾಧಿಕಾರಿಗಳು ಸರ್ಕಾರಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಇದೇ ಕಾರಣಕ್ಕೆ ನರ್ಸ್ ಲಿನಿ ಅವರ ಮೃತ ದೇಹವನ್ನು ಪೋಷಕರ ವಶಕ್ಕೆ ಅಧಿಕಾರಿಗಳ ನೀಡಲಿಲ್ಲ. ಕನಿಷ್ಠ ಪಕ್ಷ ಅವರ ತಂದೆ ಆಗಮನಕ್ಕೂ ಕಾಯದೇ ಆರೋಗ್ಯ ಇಲಾಖೆಯ ನಿರ್ದೇಶನದ ಮೇರೆಗೆ ಪತಿ ಸತೀಶ್ ಕೋಯಿಕೋಡ್ ನಲ್ಲಿನ ವಿದ್ಯುತ್ ಚಿತಾಗಾರದಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಸೋಂಕು ಹರಡುವ ಭೀತಿಯಿಂದ ಲಿನಿ ಅವರ ಮಕ್ಕಳನ್ನು ತಾಯಿಯ ಪಾರ್ಥೀವ ಶರೀರದ ದರ್ಶನಕ್ಕೆ ಕರೆತರಲಿಲ್ಲ ಎಂದು ಮೂಲಗಳು ತಿಳಿಸಿವೆ. ಇನ್ನು ಲಿನಿ ಅನಾರೋಗ್ಯದ ಬಗ್ಗೆ ತಿಳಿದು ಗಲ್ಫ್ನಲ್ಲಿದ್ದ ಪತಿ ಎರಡು ದಿನಗಳ ಹಿಂದೆಯೇ ಮನೆಗೆ ಹಿಂದಿರುಗಿದ್ದರಂತೆ.
ಕರ್ತವ್ಯ ನಿರ್ವಹಣೆಗಾಗಿ ಪ್ರಾಣವನ್ನೇ ತೊರೆದ ಲಿನಿಗೆ ಕೇರಳ ಸರ್ಕಾರದಿಂದ ಗೌರವ
ಇನ್ನು ಚಂಗರೋತ್ನ ಸೋಂಕು ತಗುಲಿದ ಯುವಕನೊಬ್ಬನಿಗೆ ಲಿನಿ ಚಿಕಿತ್ಸೆ ನೀಡುತ್ತಿದ್ದರು. ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ನೀಡಿದ್ದರೂ ಯುವಕ ಮೃತಪಟ್ಟಿದ್ದ. ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಲಿನಿಗೆ ನಿಪಾಹ್ ವೈರಸ್ ತಗುಲಿದೆ. ಬದುಕಿದ್ದಾಗಲೂ ಸೇವೆ ಮಾಡುತ್ತಿದ್ದ ಲಿನಿ, ಸಾವಿನಲ್ಲೂ ತ್ಯಾಗ ಮಾಡಿದ್ದಾಳೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಲಿನಿ ಅವರ ನಿಸ್ವಾರ್ಥ ಸೇವೆಯನ್ನು ಕೇರಳ ಸ್ಮರಿಸುತ್ತದೆ ಎಂದು ಹೇಳಿದ್ದಾರೆ.
ಲಿನಿ ನೆನೆದು ಭಾವುಕರಾದ ಸಹ ವೈದ್ಯರು
ಇನ್ನು ನರ್ಸ್ ಲಿನಿ ಸಾವನಿ ಕುರಿತಂತೆ ಸಹೋದ್ಯೋಗಿ ವೈದ್ಯರು ನೆನೆದು ಭಾವಕರಾಗಿದ್ದು, ಟ್ವಿಟರ್ ನಲ್ಲಿ ಈ ಬಗ್ಗೆ ಡಾ. ದೀಪು ಸೆಬಿನ್ ಎಂಬುವವರು ಸಂದೇಶ ಹಾಕಿದ್ದಾರೆ. ನಿಪಾಹ್ ವೈರಾಣು ಸೋಂಕಿನ ವಿರುದ್ಧ ಹೋರಾಡುತ್ತಿದ್ದ ನರ್ಸ್ ಲಿನಿ ಅದೇ ವೈರಾಣುವಿಗೆ ಬಲಿಯಾಗಿದ್ದಾರೆ. ಅವರ ಪಾರ್ಥೀವ ಶರೀರವನ್ನು ತುರ್ತು ಕಾರಣಗಳಿಂದಾಗಿ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ. ಆಕೆಯ ಕುಟುಂಬಸ್ಥರೂ ಸಹ ಆಕೆಯ ಪಾರ್ಥೀವ ಶರೀರದ ದರ್ಶನ ಪಡೆಯಲಾಗಲಿಲ್ಲ. ಲಿನಿ ಅವರ ಸೇವೆಯನ್ನು ವೈದ್ಯಕೀಯ ಲೋಕ ನೆನಪಿನಲ್ಲಿಟ್ಟುಕೊಳ್ಳಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಕೇರಳದಲ್ಲಿ ಈಗಾಗಲೇ ನಿಪಾಹ್ ವೈರಾಣು ಸೋಂಕಿಗೆ ಈಗಾಗಲೇ 10 ಮಂದಿ ಸಾವನ್ನಪ್ಪಿದ್ದು, ಈ ಪೈಕಿ ಇಂದು ಬೆಳಗ್ಗೆ ಕೊಯಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ರೋಗಿಗಳು ಇಂದು ಮೃತಪಟ್ಟಿದ್ದಾರೆ. ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ನರ್ಸ್ ಲಿನಿ (31) ಅವರು ಪತಿ ಸಜೀಶ್ ಹಾಗೂ ಪುತ್ರರಾದ ಸಿದ್ಧಾರ್ಥ್(5) ಹಾಗೂ ರಿಥುಲ್(2) ಅಗಲಿದ್ದಾರೆ. ಲಿನಿ ಮರಣದ ನಂತರ ಸೋಂಕು ತಗುಲಿ ಸತ್ತವರ ಸಂಖ್ಯೆ 10ಕ್ಕೆ ಏರಿದೆ.