ನವದೆಹಲಿ: 2019 ರ ಲೋಕಸಭಾ ಚುನಾವಣೆಗೆ ವೇದಿಕೆ ಸಜ್ಜುಗೊಳ್ಳುತ್ತಿದ್ದು, ರಾಜಕೀಯ ಪಕ್ಷಗಳ ಜೊತೆಗೆ ಕೆಲವು ಧಾರ್ಮಿಕ ಸಂಸ್ಥೆಗಳೂ ಸಹ ಚುನಾವಣೆಗೆ ಸಜ್ಜುಗೊಳ್ಳುತ್ತಿವೆ.
ಚುನಾವಣಾ ದೃಷ್ಟಿಯಿಂದ ಎಲ್ಲಾ ಪ್ರೀಸ್ಟ್ ಗಳಿಗೂ ಪತ್ರ ಬರೆದಿರುವ ದೆಹಲಿಯ ಆರ್ಚ್ ಬಿಷಪ್ ಅನಿಲ್ ಕೌಟೊ, " ದೇಶದ ಜಾತ್ಯಾತೀತತೆ ಅಪಾಯದಲ್ಲಿದ್ದು, ಪ್ರತಿ ಶುಕ್ರವಾರ ಉಪವಾಸ ಮಾಡಿ ಜಾತ್ಯಾತೀತತೆಗಾಗಿ ಪ್ರಾರ್ಥಿಸಬೇಕೆಂದು ಸೂಚನೆ ನೀಡಿದ್ದಾರೆ.
ದೇಶದಲ್ಲಿರುವ ಪ್ರಕ್ಷುಬ್ಧ ರಾಜಕೀಯ ವಾತಾವರಣ ಉಂಟಾಗಿದ್ದು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಧಕ್ಕೆ ಉಂಟಾಗಿವೆ, ಆದ್ದರಿಂದ ನಾವು ದೇಶದ ಜಾತ್ಯಾತೀತತೆ ಉಳಿಯಲು ಪ್ರಾರ್ಥನೆ ಮಾಡುವ ಪವಿತ್ರ ಕೆಲಸವನ್ನು ಮಾಡಬೇಕಾಗಿದೆ ಎಂದು ಆರ್ಚ್ ಬಿಷಪ್ ಹೇಳಿದ್ದಾರೆ.
2019 ರಲ್ಲಿ ನಾವು ಹೊಸ ಸರ್ಕಾರವನ್ನು ಪಡೆಯಲಿದ್ದೇವೆ, ನಮ್ಮ ದೇಶಕ್ಕಾಗಿ ಪ್ರಾರ್ಥನೆ ಸಲ್ಲಿಸೋಣ ಎಂದು ಪತ್ರದಲ್ಲಿ ಆರ್ಚ್ ಬಿಷಪ್ ಕರೆ ನೀಡಿದ್ದಾರೆ. ಈ ಬಗ್ಗೆ ಬಿಷಪ್ ಅವರ ಕಾರ್ಯದರ್ಶಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದು ಪ್ರತಿ ಚುನಾವಣೆಯಲ್ಲಿಯೂ ದೇಶಕ್ಕಾಗಿ ಪ್ರಾರ್ಥನೆ ಮಾಡುವ ಪರಿಪಾಠ ಹೊಂದಿದ್ದೇವೆ, ಆದರೆ ಈ ಬಾರಿ ಅದನ್ನು ರಾಜಕೀಯಗೊಳಿಸಲಾಗುತ್ತಿದೆಯಷ್ಟೇ ಎಂದು ಹೇಳಿದ್ದಾರೆ.