ಚೆನ್ನೈ: 13 ಜನರ ಸಾವಿಗೆ ಕಾರಣವಾದ ತಮಿಳುನಾಡಿನ ಸ್ಟೆರ್ಲೈಟ್ ಕಾಪರ್ ಸಂಸ್ಥೆಯ ವಿರುದ್ದದ ಪ್ರತಿಭಟನೆ ಮುಂದುವರೆದಿರುವಂತೆಯೇ ಇತ್ತ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ ಸಂಸ್ಛೆಯನ್ನು ಮುಚ್ಚುವಂತೆ ಆದೇಶ ನೀಡಿದೆ.
ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ವೇದಾಂತ ಸ್ಟೆರ್ಲೈಟ್ ಕಾಪರ್ ಸ್ಮೆಲ್ಟರ್ ಘಟಕವನ್ನು ಮುಚ್ಚುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶಿಸಿದ್ದು, ಅಲ್ಲದೆ ಕಂಪನಿಗೆ ನೀಡಲಾಗುತ್ತಿರುವ ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸುವಂತೆ ಆದೇಶಿಸಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ನಸೀಮುದ್ದೀನ್ ಅವರು ಈ ಆದೇಶ ಹೊರಡಿಸಿದ್ದು, ನಿನ್ನೆ ಸಂಜೆಯಿಂದಲೇ ಸಂಸ್ಥೆಯ ವಿದ್ಯುತ್ ಸಂಪರ್ಕವನ್ನೂ ಕೂಡ ಸ್ಥಗಿತಗೊಳಿಸಲಾಗಿದೆ.
ತೂತುಕುಡಿಯಲ್ಲಿ ಸ್ಟೆರ್ಲೈಟ್ ಸಂಸ್ಥೆಯ ವಿರುದ್ಧದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ ಬೆನ್ನಲ್ಲೇ ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿ ಈ ಸಂಬಂಧ ತನಿಖೆಗೆ ಆದೇಶಿಸಿತ್ತು. ಹೀಗಾಗಿ ಜಂಟಿ ಮುಖ್ಯ ಪರಿಸರ ಇಂಜಿನಿಯರ್ ನೇತೃತ್ವದಲ್ಲಿ ಕಳೆದ ಮೇ 18 ಮತ್ತು ಮೇ 19ರಂದು ಘಟಕದಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ಘಟಕದಿಂದ ವಿಷಕಾರಿ ಅನಿಲ ಬಿಡುಗಡೆಯಾಗುತ್ತಿರುವುದು ಪತ್ತೆಯಾಗಿತ್ತು. ಇದೇ ಕಾರಣಕ್ಕೆ ಘಟಕವನ್ನು ಮುಚ್ಚಲು ಇಲಾಖೆ ಅದೇಶ ನೀಡಿದೆ.
ಇನ್ನು ಇಲಾಖೆ ಹೊರಡಿಸಿರುವ ಆದೇಶದಲ್ಲಿ ಸ್ಟೆರ್ಲೈಟ್ ಸಂಸ್ಥೆ ಸೆಕ್ಷನ್ 33ಎ ನೀರಿನ ಕಾಯ್ದೆ (ಮಾಲಿನ್ಯ ನಿಯಂತ್ರಣ ಕಾನೂನು), 1974ರಲ್ಲಿ ತಿದ್ದಪಡಿಯಾದ 31ಎ ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ. 1981ರಲ್ಲಿ ತಿದ್ದುಪಡಿ ಕಾಯ್ದೆಯ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ತತ್ ಕ್ಷಣದಿಂದಲೇ ಕಂಪನಿಯನ್ನು ಮುಚ್ಚುವಂತೆ ಆದೇಶ ನೀಡಲಾಗಿದೆ. ಅಲ್ಲದೆ ಕಂಪನಿಗೆ ಒದಗಿಸಲಾಗುತ್ತಿರುವ ವಿದ್ಯುತ್ ಪೂರೈಕೆಯನ್ನೂ ಸ್ಥಗಿತಗೊಳಿಸುವಂತೆ ಇಲಾಖೆ ಆದೇಶ ನೀಡಿದೆ. ಅಂತೆಯೇ ತನ್ನ ಅದೇಶದ ಪ್ರತಿಯನ್ನು ಇಲಾಖೆ ಜಿಲ್ಲಾಧಿಕಾರಿಗಳಿಗೂ ರವಾನೆ ಮಾಡಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos