ತಿರುವನಂತಪುರ: ಮಾರಕ ನಿಪಾಹ್ ವೈರಾಣು ಸೋಂಕು ಪೀಡಿತ ರೋಗಿಗೆ ಚಿಕಿತ್ಸೆ ನೀಡುತ್ತಲೇ ಅದೇ ವೈರಾಣು ಸೋಂಕಿಗೆ ತುತ್ತಾಗಿ ಬಲಿಯಾದ ಕೇರಳದ ದುರಂತ ನಾಯಕಿ, ನರ್ಸ್ ಲಿನಿ ಕುಟುಂಬಕ್ಕೆ ಇದೀಗ ನೆರವಿನ ಮಹಾಪೂರವೇ ಹರಿದುಬರುತ್ತಿದೆ.
ನಿಪಾಹ್ ವೈರಾಣು ಸೋಂಕಿಗೆ ಚಿಕಿತ್ಸೆ ನೀಡುತ್ತಿದ್ದ ದಾದಿಯೇ ಬಲಿಯಾದ ವಿಚಾರ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿದ್ದು, ಇದೀಗ ನರ್ಸ್ ಲಿನಿ ಕುಟುಂಬಕ್ಕೆ ಕೇರಳ ಸರ್ಕಾರ ನೆರವಿನ ಹಸ್ತ ಚಾಚಿದೆ. ಮೂಲಗಳ ಪ್ರಕಾರ ಲಿನಿ ಪತಿ ಸತೀಶ್ ಅವರಿಗೆ ಸರ್ಕಾರ ಉದ್ಯೋಗ ನೀಡುವ ಭರವಸೆ ನೀಡಿದೆ. ಅಲ್ಲದೆ ಲಿನಿ ಕುಟುಂಬಕ್ಕೆ 10 ಲಕ್ಷ ಪರಿಹಾರವನ್ನೂ ಕೂಡ ಕೇರಳ ಸರ್ಕಾರ ಘೋಷಣೆ ಮಾಡಿದೆ.
ಇನ್ನು ಅತ್ತ ಕೇರಳ ಸರ್ಕಾರ ಪರಿಹಾರದ ಹೊರತಾಗಿಯೂ ಲಿನಿ ಕುಟುಂಬಕ್ಕೆ ಪರಿಹಾರದ ಮಹಾಪೂರವೇ ಹರಿದು ಬರುತ್ತಿದ್ದು, ಅಬುದಾಬಿಯಲ್ಲಿ ವಾಸವಿರುವ ಇಬ್ಬರು ಮಹಿಳೆಯರು ಮಕ್ಕಳ ಸಂಪೂರ್ಣ ಶೈಕ್ಷಣಿಕ ವೆಚ್ಚ ಭರಿಸುವುದಾಗಿ ಹೇಳಿದ್ದಾರೆ.
ಪಾಲಕ್ಕಾಡ್ ನ ನೆಮೆರಾದಲ್ಲಿರುವ ಅವಿಟಿಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ಕಾರ್ಯಕಾರಿ ನಿರ್ದೇಶಕಿಯರಾಗಿರುವ ಶಾಂತಿ ಪ್ರಮೋತ್, ಜ್ಯೋತಿ ಪಾಲತ್ ನರ್ಸ್ ಲಿನಿ ಕುಟುಂಬಕ್ಕೆ ನೆರವಿನ ಹಸ್ತ ಚಾಚಿದ್ದಾರೆ. ನರ್ಸ್ ಲಿನಿಗೆ 5 ಮತ್ತು 2 ವರ್ಷದ ಇಬ್ಬರು ಮಕ್ಕಳಿದ್ದಾರೆ. ಅವರಿಬ್ಬರಿಗೂ ಈ ಶೈಕ್ಷಣಿಕ ವರ್ಷದಿಂದ ಅವರ ಶಿಕ್ಷಣ ಪೂರ್ಣವಾಗುವವರೆಗೂ ಸಂಪೂರ್ಣ ವೆಚ್ಚವನ್ನು ನಾವೇ ಭರಿಸುತ್ತೇವೆ ಎಂದು ಶಾಂತಿ ಹಾಗೂ ಜ್ಯೋತಿ ಭರವಸೆ ನೀಡಿದ್ದಾರೆ. ಈ ಸಂಬಂಧ ಲಿನಿ ಕುಟುಂಬವನ್ನ ಸಂಪರ್ಕಿಸಿದ್ದು ಮಾತುಕತೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ.
ಪ್ರಯೋಜಕತ್ವದ ಅಧಿಕೃತ ದಾಖಲೆಗಳನ್ನು ಶೀಘ್ರದಲ್ಲೇ ಕೋಯಿಕೋಡ್ನಲ್ಲಿರುವ ಲಿನಿ ಕುಟುಂಬಕ್ಕೆ ಹಸ್ತಾಂತರಿಸೋದಾಗಿಯೂ ತಿಳಿಸಿದ್ದಾರೆ. ನಾವು ಕೂಡ ವೈದ್ಯಕೀಯ ಕ್ಷೇತ್ರದಲ್ಲೇ ಇದ್ದೇವೆ. ಲಿನಿ ಕುಟುಂಬಕ್ಕೆ ನೆರವಾಗೋದು ನಮ್ಮ ಕರ್ತವ್ಯ ಎಂದು ಶಾಂತಿ ಹಾಗೂ ಜ್ಯೋತಿ ಹೇಳಿದ್ದಾರೆ. ಶಾಂತಿ ಮತ್ತು ಜ್ಯೋತಿ ಅವರ ಕಾರ್ಯಕ್ಕೆ ಇದೀಗ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಂತೆಯೇ ಇನ್ನೂ ಹಗಲವರು ಲಿನಿ ಕುಟುಂಬಕ್ಕೆ ನೆರವು ನೀಡಲು ಮುಂದೆ ಬಂದಿದ್ದಾರೆ.
ಕೇರಳದಲ್ಲಿ ಮರಣಮೃದಂಗ ಬಾರಿಸುತ್ತಿರುವ ನಿಪಾಹ್ ವೈರಾಣು ಸೋಂಕು ಪೀಡಿತ ರೋಗಿಗಳನ್ನು ಉಪಚರಿಸುತ್ತಿದ್ದ ವೇಳೆ ನರ್ಸ್ ಲಿನಿ ಅವರಿಗೂ ಸೋಂಕು ತಗುಲಿತ್ತು. ಅಲ್ಲದೆ ಸೋಂಕು ತಗುಲಿದ ಕೆಲವೇ ದಿನಗಳಲ್ಲಿ ಆಕೆ ಮೃತಪಟ್ಟಿದ್ದರು. ಆಕೆಗೆಯ ದೇಹದಲ್ಲಿರುವ ವೈರಾಣು ಮತ್ತೆ ಬೇರೆಯವರಿಗೂ ಹರಡುವ ಸಾಧ್ಯತೆ ಇದ್ದುದರಿಂದ ಆಕೆಯನ್ನು ಅವರ ಪೋಷಕರಿಗೂ ತಿಳಿಸದೇ ವಿದ್ಯುತ್ ಚಿತಾಗಾರದಲ್ಲಿ ತುರ್ತಾಗಿ ಅಂತ್ಯಕ್ರಿಯೆ ನಡೆಸಲಾಯಿತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos