ನವದೆಹಲಿ: ಕೇರಳದಲ್ಲಿ ತನ್ನ ಮರಣ ಮೃದಂಗ ಮುಂದುವರೆಸಿರುವ ನಿಪಾಹ್ ವೈರಾಣು ಸೋಂಕಿಗೆ ಸಂಬಂಧಿಸಿದಂತೆ ಭಾರತ ಆಸ್ಟ್ರೇಲಿಯಾ ಸರ್ಕಾರಕ್ಕೆ ಪತ್ರ ಬರೆದು ನೆರವು ಕೋರಿದೆ ಎಂದು ತಿಳಿದುಬಂದಿದೆ.
ಕೇಂದ್ರದ ವೈದ್ಯಕೀಯ ಇಲಾಖೆಯೂ ಸೇರಿದಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಶತಾಯಗತಾಯ ಈ ಮಾರಣಾಂತಿಕ ನಿಪಾಹ್ ವೈರಾಣು ಸೋಂಕು ನಿಯಂತ್ರಣಕ್ಕೆ ಪ್ರಯತ್ನ ಮುಂದುವರೆಸಿದ್ದು, ಈ ಸಂಬಂಧ ಭಾರತೀಯ ವೈದ್ಯಕೀಯ ಇಲಾಖೆ ಆಸ್ಟ್ರೇಲಿಯಾ ಸರ್ಕಾರಕ್ಕೆ ಪತ್ರ ಬರೆದಿದೆ ಎನ್ನಲಾಗಿದೆ.
ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ಸಂಶೋಧಕರು ವಿಶೇಷ ಆ್ಯಂಟಿಬಾಡಿಯನ್ನು ಸಂಶೋಧನೆ ಮಾಡಿದ್ದು, ಈ ಆ್ಯಂಟಿಬಾಡಿ ಮುಖಾಂತರ ನಿಪಾಹ್ ವೈರಾಣುವನ್ನು ನಿಯಂತ್ರಿಸಬಹುದೇ ಎಂಬುದನ್ನು ತಿಳಿಯಲು ಭಾರತೀಯ ವೈದ್ಯಕೀಯ ಸಂಶೋಧನಾ ಇಲಾಖೆಯ ವೈದ್ಯರು ಆ್ಯಂಟಿಬಾಡಿಯನ್ನು ನೀಡುವಂತೆ ಕ್ವೀನ್ಸ್ ಲ್ಯಾಂಡ್ ಸಂಶೋಧಕರಲ್ಲಿ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಕೆಲ ಸಂಶೋಧಕರು ಅಭಿಪ್ರಾಯಪಟ್ಟಿರುವಂತೆ ಕ್ವೀನ್ಸ್ ಲ್ಯಾಂಡ್ ಸಂಶೋಧರು ತಯಾರಿಸಿರುವ ಈ ಆ್ಯಂಟಿಬಾಡಿಯನ್ನು ಈ ವರೆಗೂ ಮನಷ್ಯರ ಮೇಲೆ ಪ್ರಯೋಗ ಮಾಡಿಲ್ಲ ಎನ್ನಲಾಗಿದೆ.
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಐಸಿಎಂಆರ್ ಮುಖ್ಯಸ್ಥರಾದ ಡಾ. ಬಲರಾಮ್ ಭಾರ್ಗವ ಅವರು, 'ಭಾರತದಲ್ಲಿ ಮನಷ್ಯರಲ್ಲಿ ಕಾಣುತ್ತಿರುವ ನಿಪಾಹ್ ವೈರಾಣುವನ್ನು ಈ ಆ್ಯಂಟಿಬಾಡಿ ನಿಯಂತ್ರಿಸುವುದೇ? ಎಂದು ಪರೀಕ್ಷಿಸಲು, ಅವರಲ್ಲಿರುವ ಮೋನೋಕ್ಲೋನಲ್ ಆ್ಯಂಟಿ ಬಾಡಿಯನ್ನು ನೀಡುವಂತೆ ನಾವು ಮನವಿ ಮಾಡಿದ್ದೇವೆ. ಆಸ್ಟ್ರೇಲಿಯಾದಲ್ಲಿ ಅದನ್ನ ಮನುಷ್ಯರ ಮೇಲೆ ಪ್ರಯೋಗಿಸಿಲ್ಲ. ಕೃತಕ ವಾತಾವರಣದಲ್ಲಿ ಬಹುತೇಕ ಟೆಸ್ಟ್ ಟ್ಯೂಬ್ಗಳಲ್ಲೇ ಪರೀಕ್ಷೆ ನಡೆಸಲಾಗಿದ್ದು, ವೈರಸ್ ನಿಯಂತ್ರಣಕ್ಕೆ ಉಪಯುಕ್ತ ಎಂದು ತಿಳಿದು ಬಂದಿದೆ' ಎಂದು ಹೇಳಿದರು.
ಆಸಿಸ್ ಸರ್ಕಾರದಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ
ಇನ್ನು ಆಸ್ಟ್ರೇಲಿಯಾ ಸರ್ಕಾರ ಕೂಡ ತನ್ನಲ್ಲಿರುವ ಮೋನೋಕ್ಲೋನಲ್ ಆ್ಯಂಟಿ ಬಾಡಿಯನ್ನು ಭಾರತದೊಂದಿಗೆ ಹಂಚಿಕೊಳ್ಳಲು ಸಿದ್ಧವಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತದೆ ಎಂಬುದು ತಿಳಿದಿಲ್ಲ.
ಮಾರಣಾಂತಿಕ ನಿಪಾಹ್ ವೈರಸ್ ಗೆ ಕೇರಳದಲ್ಲಿ ಇದುವರೆಗೂ ಒಟ್ಟು 12 ಜನರು ಮೃತಪಟ್ಟಿದ್ದಾರೆ. ಇನ್ನೂ ಹಲವರಿಗೆ ನಿಫಾ ವೈರಸ್ ಸೋಂಕು ತಗುಲಿರುವ ಶಂಕೆ ಇದೆ. ಹೀಗಾಗಿ ನಿಫಾ ಸೋಂಕು ಮತ್ತಷ್ಟು ಹರಡುವ ಮುನ್ನ ನಿಯಂತ್ರಿಸುವುದು ಅತ್ಯವಶ್ಯಕವಾಗಿದ್ದು, ಭಾರತ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos