ಲಖನೌ(ಉತ್ತರ ಪ್ರದೇಶ): ಉತ್ತರಾಖಂಡ್ ರಾಮನಗರ್ ಜಿಲ್ಲೆಯ ದೇವಾಲಯ ಸಮೀಪ ಉದ್ರಿಕ್ತ ಗುಂಪಿನಿಂದ ಹಲ್ಲೆಗೊಳಗಾಗಿದ್ದ ಮುಸ್ಲಿಂ ಯುವಕನನ್ನು ಸಿಕ್ಖ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪಾರು ಮಾಡಿದ್ದು ಧೈರ್ಯದ ವರ್ತನೆ ತೋರಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪೋಲೀಸ್ ಅಧಿಕಾರಿಯ ಕಾರ್ಯವೈಖರಿ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಪ್ರಶಂಸೆ ಗಳಿಸಿದೆ.
ಕಳೆದ ಮಂಗಳವಾರ ಈ ಘಟನೆ ನಡೆದಿದ್ದು ರಾಮನಗರ್ ನಿಂದ 14-15 ಕಿ.ಮೀ ದೂರದಲ್ಲಿರುವ ಗಿರಿಜಾ ದೇವಿ ದೇವಸ್ಥಾನದ ಸಮೀಪ ಹಿಂದೂ ಹುಡುಗಿಯೊಡನೆ "ಲೈಂಗಿಕ ಭಂಗಿಯಲ್ಲಿ ಇದ್ದ'' ಎನ್ನಲಾದ ಮುಸ್ಲಿಂ ಯುವಕನನ್ನು ಉದ್ರಿಕ್ತ ಗುಂಪು ಥಳಿಸಿ ಸಾಯಿಸಲು ಮುಂದಾಗಿತ್ತು. ಆಗ ಅಲ್ಲಿಗಾಗಮಿಸಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಗನ್ದೀಪ್ ಸಿಂಗ್ ಜನರ ಗುಂಪಿನಿಂದ ಆ ಯುವ ಜೊಡಿಯನ್ನು ಪಾರು ಮಾಡಿದ್ದಾರೆ.
ಯುವತಿ ಹಾಗೂ ಮುಸ್ಲಿಂ ಯುವಕ ಭೇಟಿಯಾಗುವುದಕ್ಕಾಗಿ ಗಿರಿಜಾ ದೇವಿ ದೇವಸ್ಥಾನದ ಬಳಿ ಆಗಮಿಸಿದ್ದಾಗ ಅವರಿಗೆ ’ಬುದ್ದಿ ಕಲಿಸಬೇಕು’ ಎಂದು ನಿರ್ಧರಿಸಿದ್ದ ಜನರ ಗುಂಪೊಂದು ಹಿಂಬಾಲಿಸಿ ಬಂದಿತ್ತು. ಬಳಿಕ ಆ ಜೋಡಿಯನ್ನು ಸುತ್ತುವರಿದು ಹಲ್ಲೆಗೆ ಮುಂದಾಗಿತ್ತು. ಈ ಸುದ್ದಿಯನ್ನು ಯಾರದೋ ಮೂಲಕ ತಿಳಿದ ಗಗನ್ದೀಪ್ ಅಲ್ಲಿಗೆ ಧಾವಿಸಿ ಅದಾಗಲೇ ಜೋಡಿಯನ್ನು ಸುತ್ತುವರಿದಿದ್ದ ಗುಂಪಿಉನೊಳಗೆ ನುಗ್ಗಿ ಯುವ ಜೋಡಿಯನ್ನು ರಕ್ಷಿಸಿದ್ದಾರೆ.
ಹೀಗೆ ರಕ್ಷಣೆ ಮಾಡಿದ ಅವರನ್ನು ಪೊಲೀಸ್ ರಕ್ಷಣೆಯಲ್ಲಿ ಠಾಣೆಗೆ ಕರೊತಂದು ಮತ್ತೆ ಸುರಕ್ಷಿತವಾಗಿ ಅವರವರ ಪೋಷಕರಿಗೆ ಒಪ್ಪಿಸಿದ್ದಾರೆ.