ದೇಶ

ಪ್ರತಿಪಕ್ಷಗಳ ನಾಯಕರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಒಂದಾಗಿದ್ದಾರೆ: ಪ್ರಧಾನಿ ಮೋದಿ

Lingaraj Badiger
ಕಟಕ್: ಪ್ರತಿಪಕ್ಷಗಳ ಒಗ್ಗಟ್ಟಿನ ವಿರುದ್ಧ ಶನಿವಾರ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಭ್ರಷ್ಟ ನಾಯಕರು ದೇಶ ರಕ್ಷಣೆಗೆ ಒಂದಾಗಿಲ್ಲ. ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಒಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧ ಕ್ರಮ ತೆಗೆದುಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದ್ದರಿಂದ ಸುಮಾರು 5 ಸಾವಿರ ಕೋಟಿ ರುಪಾಯಿ ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗಿ, ಜಾಮೀನಿನ ಮೇಲೆ ಹೊರಗಿರುವ ನಾಯಕರೆಲ್ಲ ಈಗ ಒಗ್ಗಟ್ಟಾಗಿದ್ದಾರೆ ಎಂದು ಮೋದಿ ಟೀಕಿಸಿದರು.
ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂದು ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಗಾಂಧಿಗಳು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾಮೀನು ಪಡೆದಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಅವರ ತಾಯಿ ಸೋನಿಯಾ ಗಾಂಧಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ನಾವು ಭರವಸೆ ನೀಡಿದಂತೆ ನಾಲ್ಕು ವರ್ಷ ಭ್ರಷ್ಟಾಚಾರ ಮುಕ್ತ ಮತ್ತು ಭ್ರಷ್ಟಾಚಾರ ವಿರೋಧಿ ಸರ್ಕಾರ ನೀಡಿದ್ದೇವೆ. ಇದರ ಪರಿಣಾಮವಾಗಿಯೇ ಇಂದು ನಾಲ್ವರು ಮಾಜಿ ಮುಖ್ಯಮಂತ್ರಿಗಳು ಜೈಲಿನಲ್ಲಿದ್ದಾರೆ ಎಂದರು.
ಭ್ರಷ್ಟಾಚಾರದ ವಿರುದ್ಧದ ನಮ್ಮ ಬದ್ಧತೆಯೇ ಇಂದು ಬದ್ಧ ವೈರಿಗಳನ್ನು ಸಹ ಒಂದಾಗುವಂತೆ ಮಾಡಿದೆ. ದೇಶದ ಜನತೆ ಇದೆನ್ನೆಲ್ಲ ಗಮನಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.
ಕುಟುಂಬ ರಾಜಕಾರಣದಲ್ಲಿ ಬೆಂದಿದ್ದ ದೇಶ, ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಎಲ್ಲ ವಿಭಾಗದಲ್ಲೂ ಅಗ್ರ ಪಂಕ್ತಿ ಕಾಯ್ದುಕೊಳ್ಳುತ್ತಿದೆ. ಮೂಲಸೌಕರ್ಯಗಳಿಗೂ ಕೈಚಾಚುವ ಕಾಲ ದೂರವಾಗಿ ಸರ್ಕಾರದ ಪ್ರತಿ ಸೌಲಭ್ಯಗಳು ಬಡವರ ಮನೆ ಬಾಗಿಲಿಗೆ ಬರುವಂತಾಗಿದೆ. ದೇಶ ಇಂದು ಕಾಳಧನದಿಂದ ಜನಧನ್ ಗೆ ಪರಿವರ್ತನೆಯಾಗುತ್ತಿದೆ. ಕೆಟ್ಟ ಆಡಳಿತ ವ್ಯವಸ್ಥೆಯಿಂದ ಅತ್ಯುತ್ತಮ ವ್ಯವಸ್ಥೆಗೆ ಪರಿವರ್ತನೆ ಕಾಣುತ್ತಿದೆ ಎಂದರು.
ಬೆಂಗಳೂರಿನಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ವೇಳೆ ವಿವಿಧ ಪ್ರತಿಪಕ್ಷಗಳ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದರು.
SCROLL FOR NEXT