ದೇಶ

ಪತ್ನಿ ಐಶ್ವರ್ಯಾ ರಾಯ್'ಗೆ ವಿಚ್ಛೇದನ ನೀಡುತ್ತಿರುವುದು ನಿಜ ಎಂದ ತೇಜ್ ಪ್ರತಾಪ್

Manjula VN
ಪಾಟ್ನ: ದಾಂಪತ್ಯ ಜೀವನಕ್ಕೆ ಕಾಲಿಟ್ಟ 6 ತಿಂಗಳುಗಳಲ್ಲೇ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದನ್ನು ಆರ್'ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಶನಿವಾರ ದೃಢಪಡಿಸಿದ್ದಾರೆ. 
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಪತ್ನಿ ಐಶ್ವರ್ಯಾಗೆ ವಿಚ್ಛೇದನ ನೀಡುತ್ತಿರುವುದು ನಿಜ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದು ನಿಜ. ಉಸಿರು ಕಟ್ಟಿಕೊಂಡು ಜೀವನ ನಡೆಸುವುದಕ್ಕಿಂತಲೂ ವಿಚ್ಛೇದನ ಪಡೆಯುವುದು ಒಳಿತು ಎನಿಸಿತು ಎಂದು ಹೇಳಿದ್ದಾರೆ. 
ಕಳೆದ ಮೇ 12 ರಂದು ತೇಜ್ ಪ್ರತಾಪ್ ಅವರು ಆರ್'ಜೆಡಿ ಮುಖಂಡ ಚಂದ್ರಿಕಾ ರಾಯ್ ಅವರ ಪುತ್ರಿ ಐಶ್ವರ್ಯ ರಾಯ್ ಅವರನ್ನು ವರಿಸಿದ್ದರು. ಆದರೆ, ಇದೀಗ ಪ್ರತಾಪ್ ಪಟನಾ ಕೋರ್ಟ್ ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಲಾಲೂ ಕುಟುಂಬ ಮನೆಯನ್ನು ನೋಡಿಕೊಂಡು ಹೋಗುವಂತಹ ಸೊಸೆಯನ್ನು ಬಯಸಿತ್ತು. ಆದರೆ, ಐಶ್ವರ್ಯಾ ಅತ್ಯಂತ ಸಿರಿವಂತ ಮನೆತನದಿಂದ ಬಂದವರು. ಮತ್ತೊಂದೆಡೆ ತೇಜ್ ಪ್ರತಾಪ್ ಕೃಷ್ಣನಂತೆ ವೇಷ ಧರಿಸಿ ಕೊಳಲು ಊದುವ, ಯೋಗಿಯ ಭಂಗಿಯಲ್ಲಿ ಕುಳಿತ ಕೆಲ ಪೋಟೋಗಳು ಇತ್ತೀಚೆಗೆ ಭಾರೀ ವ್ಯಂಗ್ಯಕ್ಕೆ ಕಾರಣವಾಗಿತ್ತವು. ಜೊತೆಗೆ ವಿವಾಹದ ಬಳಿಕ ಸೋದರರಾದ ತೇಜ್ ಪ್ರತಾಪ್ ಹಾಗೂ ತೇಜಸ್ವಿ ನಡುವೆ ಬಿರುಕು ಕೂಡ ಮೂಡಿತ್ತು. 
ಆರ್'ಜೆಡಿಯಲ್ಲಿ ತೇಜ್ ಪ್ರತಾಪ್'ಗಿಂತ ತೇಜಸ್ವಿಗೆ ಹೆಚ್ಚಿನ ಮನ್ನಣೆ ಸಿಗುತ್ತಿತ್ತು. ಈ ಎಲ್ಲಾ ವಿಚಾರಗಳು ಕೇವಲ 6 ತಿಂಗಳಲ್ಲೇ ನೂತನ ಜೋಡಿಯ ಸಂಬಂಧವನ್ನು ಮತ್ತೆ ಸರಿಪಡಿಸಲಾರದಷ್ಟು ದೂರಕ್ಕೆ ಕೊಂಡೊಯ್ದಿತ್ತು ಎಂದು ಹೇಳಲಾಗುತ್ತಿದೆ. 
SCROLL FOR NEXT