ಆರ್ ಬಿಐ ಸಂಗ್ರಹಿಸಿರುವ 3.6 ಲಕ್ಷ ಕೋಟಿಯನ್ನು ಕೇಳುತ್ತಿಲ್ಲ, ತಪ್ಪು ಸಂದೇಶ ರವಾನೆಯಾಗುತ್ತಿದೆ: ಕೇಂದ್ರ ಸರ್ಕಾರ
ನವದೆಹಲಿ: ಒಂದು ವಾರದಿಂದ ಆತಂಕಕ್ಕೆ ಕಾರಣವಾಗಿರುವ ಆರ್ ಬಿಐ-ಕೇಂದ್ರ ಸರ್ಕಾರದ ನಡುವಿನ ಜಟಾಪಟಿ ನಿರ್ಣಾಯಕ ಹಂತ ತಲುಪುವ ಸೂಚನೆಗಳು ಬಂದಿದ್ದು, ಆರ್ ಬಿಐ ಸಂಗ್ರಹಿಸಿರುವ 3.6 ಲಕ್ಷ ಕೋಟಿಯಷ್ಟು ಮೀಸಲು ನಿಧಿಯನ್ನು ಕೇಳಿಲ್ಲ ಎಂದು ಕೇಂದ್ರ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಶ್ ಚಂದ್ರ ಗರ್ಗ್ ಹೇಳಿದ್ದಾರೆ.
ಆರ್ ಬಿಐಗೆ ಸೂಕ್ತ ಆರ್ಥಿಕ ಬಂಡವಾಳ ಚೌಕಟ್ಟನ್ನು ವಿಧಿಸುವ ಪ್ರಸ್ತಾವನೆ ಬಗ್ಗೆ ಮಾತ್ರ ಚರ್ಚೆ ನಡೆಯುತ್ತಿದೆ, ಈ ಕುರಿತಾಗಿ ಮಾಧ್ಯಮಗಳಲ್ಲಿ ಹಲವು ತಪ್ಪು ಮಾಹಿತಿಗಳು ಹರಡುತ್ತಿವೆ. ಸರ್ಕಾರದ ಆರ್ಥಿಕ ಲೆಕ್ಕಾಚಾರಗಳು ಸರಿಯಾಗಿಯೇ ಇವೆ. ಈಗ ಹಬ್ಬಿರುವ ಮಾಹಿತಿಯ ಪ್ರಕಾರ ಆರ್ ಬಿಐ ನಿಂದ 3.6 ಲಕ್ಷ ಕೋಟಿಯನ್ನು ಸರ್ಕಾರಕ್ಕೆ ವರ್ಗಾವಣೆ ಮಾಡುವಂತೆ ಕೇಳುತ್ತಿಲ್ಲ ಎಂದು ಸುಭಾಶ್ ಚಂದ್ರ ಗರ್ಗ್ ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ ಆರ್ಥಿಕ ಮಾರ್ಗಸೂಚಿಗಳ ಬಗ್ಗೆಯೂ ಮಾತನಾಡಿರುವ ಅವರು, ಸರ್ಕಾರ ಹಾಕಿಕೊಂಡಿರುವ ಹಣಕಾಸಿನ ಕೊರತೆಯ ಮಟ್ಟವನ್ನು ಶೇ.3.3 ಕ್ಕೆ ತರುವ ಗುರಿ ಹೊಂದಿದೆ. ಈ ಟಾರ್ಗೆಟ್ ಗೆ ಈಗಲೂ ಸರ್ಕಾರ ಬದ್ಧವಾಗಿದೆ. 2018-19 ರ ಆರ್ಥಿಕ ವರ್ಷವನ್ನು ಆರ್ಥಿಕ ಕೊರತೆಯನ್ನು ಶೇ.3.3 ರಷ್ಟಿರುವಂತೆ ಪೂರ್ಣಗೊಳಿಸುತ್ತೇವೆ, ಆರ್ ಬಿಐ ಸಂಗ್ರಹಿಸಿರುವ 3.6 ಲಕ್ಷ ಕೋಟಿಯನ್ನು ಕೇಳುತ್ತಿಲ್ಲ ಬದಲಾಗಿ ಕೇವಲ ಆರ್ಥಿಕ ಬಂಡವಾಳ ಚೌಕಟ್ಟನ್ನು ವಿಧಿಸುವ ಪ್ರಸ್ತಾವನೆ ಬಗ್ಗೆ ಮಾತ್ರ ಚರ್ಚೆ ನಡೆದಿದೆ ಎಂದು ಸುಭಾಶ್ ಚಂದ್ರ ಗರ್ಗ್ ಸ್ಪಷ್ಟಪಡಿಸಿದ್ದಾರೆ.
ನ.19 ರಂದು ಆರ್ಥಿಕ ಬಂಡವಾಳ ಚೌಕಟ್ಟಿನ ಬಗ್ಗೆಯೂ ಆರ್ ಬಿಐ ಹಾಗೂ ಕೇಂದ್ರ ಸರ್ಕಾರದ ನಡುವೆ ಮಾತುಕತೆ ನಡೆಯಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos