ಪ್ರಣಾಳಿಕೆ ಬಿಡುಗಡೆ ಮಾಡುತ್ತಿರುವ ಕಮಲ್ ನಾಥ್
ಭೋಪಾಲ್: ಮಧ್ಯಪ್ರದೇಶದಲ್ಲಿ 15 ವರ್ಷಗಳ ನಂತರ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸದೊಂದಿಗೆ ಕಾಂಗ್ರೆಸ್ ಶನಿವಾರ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ರೈತರ ಸಾಲ ಮನ್ನಾ ಹಾಗೂ ಗೋಶಾಲೆ ಸ್ಥಾಪನೆ ಸೇರಿದಂತೆ ಹಲವು ಭರವಸೆಗಳನ್ನು ನೀಡಿದೆ.
ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಅವರು ಕಾಂಗ್ರೆಸ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಅಧಿಕಾರಕ್ಕೆ ಬಂದ ಹತ್ತೇ ದಿನದಲ್ಲಿ ರೈತರ ಸಾಲ ಮನ್ನಾ, ಪ್ರತಿಯೊಂದು ಗ್ರಾಮ ಪಂಚಾಯ್ತಿ ಪ್ರದೇಶದಲ್ಲಿ ಗೋಶಾಲೆ ಸ್ಥಾಪನೆ, ರೈತರ ವಿದ್ಯುತ್ ದರ ಕಡಿತ ಸೇರಿದಂತೆ ಹಲವಾರು ಭರವಸೆಗಳನ್ನು ನೀಡಿದೆ.
ವಚನ್ ಪತ್ರ ಎಂಬ ತಲೆಬರಹದಡಿಯಲ್ಲಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಇದರಲ್ಲಿ 50 ಸಬ್ ಕ್ಯಾಟಗರಿ ಮಾಡಿ,ಅದರಲ್ಲಿ 973 ಅಂಶಗಳನ್ನು ಸೇರಿಸುವ ಮೂಲಕ ಭರ್ಜರಿ ಭರವಸೆಗಳನ್ನು ನೀಡಿದೆ ಎಂದು ವರದಿ ತಿಳಿಸಿದೆ.
ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಕಮಲ್ ನಾಥ್ ಅವರು, ರೈತರಿಗೆ ವಿದ್ಯುತ್ ಬಿಲ್ ನಲ್ಲಿ ಶೇ.50ರಷ್ಟು ದರ ಕಡಿತ ಮಾಡಲಾಗುವುದು, ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ, ಪ್ರತಿ ಗ್ರಾಮ ಪಂಚಾಯ್ತಿ ಪ್ರದೇಶದಲ್ಲಿ ಗೋ ಶಾಲೆ ಸ್ಥಾಪನೆ, ಕೃಷಿ ಸಾಲ ಮನ್ನಾ ಮಾಡುವುದು ಸೇರಿದಂತೆ ಹಲವು ಪ್ರಮುಖ ಅಂಶಗಳಿವೆ ಎಂದು ಹೇಳಿದರು.
ರಾಜ್ಯ ಹಾಗೂ ರಾಷ್ಟ್ರೀಯ ಬ್ಯಾಂಕ್ ಗಳಲ್ಲಿ ಇರುವ ರೈತರ ಸಾಲ ಮನ್ನಾ ಮಾಡಲಾಗುವುದು, 17 ಬೆಳೆಗಳಿಗೆ ಬೋನಸ್, ಪ್ರತಿ ಕುಟುಂಬದ ನಿರುದ್ಯೋಗಿ ಸದಸ್ಯನಿಗೆ 10 ಸಾವಿರ ರೂಪಾಯಿ ನೀಡಲಾಗುವುದು, ಹುಡುಗಿಯ ಮದುವೆಗೆ 51 ಸಾವಿರ ರೂಪಾಯಿ ಧನಸಹಾಯ, ರಾಮವನ ಗಮನ ಪಥ ನಿರ್ಮಾಣ ಮಾಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಭರವಸೆ ನೀಡಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos