ಭುವನೇಶ್ವರ: ತನ್ನನ್ನು ಬಿಟ್ಟು ಬೇರೊಬ್ಬ ಸ್ತ್ರೀಯೊಂದಿಗೆ ಸಂಗ ಮಾಡಿ ಅದನ್ನು ಸಮರ್ಥಿಸಿಕೊಂಡಿದ್ದ ಪ್ರಿಯಕರನ ಮರ್ಮಾಂಗವನ್ನು ವಿವಾಹಿತ ಮಹಿಳೆಯೊಬ್ಬಳು ಕತ್ತರಿಸಿ ಹಾಕಿರುವ ಘಟನೆ ಒಡಿಶಾದಲ್ಲಿ ನಡೆದಿದೆ.
ಒಡಿಶಾದ ಕೆಯೊಂಜ್ಹಾರ ಜಿಲ್ಲೆಯ ಹರಿಚಂದನ್ ಪುರ್ ಪ್ರದೇಶದಲ್ಲಿ ಈ ನಡೆದಿದ್ದು, 24 ವರ್ಷದ ಕಮಲಾ ಪಾತ್ರ ಎಂಬ ವಿವಾಹಿತ ಮಹಿಳೆ ತನ್ನ ಪ್ರಿಯಕರ 25 ವರ್ಷದ ರಾಜೇಂದ್ರ ನಾಯಕ್ ಎಂಬಾತನ ಮರ್ಮಾಂಗವನ್ನು ಕತ್ತರಿಸಿ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.
ಸಂತ್ರಸ್ಥ ಯುವಕ ರಾಜೇಂದ್ರ ನಾಯಕ್ ಅವಿವಾಹಿತನಾಗಿದ್ದು, ಈತ ಜರಬಿದಾ ಗ್ರಾಮದ ಘತಗಾನ್ ಪ್ರದೇಶದ ನಿವಾಸಿಯಾಗಿದ್ದಾನೆ. ಅಂತೆಯೇ ಪ್ರಸ್ತುತ ಬಂಧನಕ್ಕೀಡಾಗಿರುವ ಮಹಿಳೆ ಕಮಲಾ ಹರಿಚಂದನ್ ಪುರದ ನಿವಾಸಿಯಾಗಿದ್ದು, ಇಬ್ಬರೂ ಸಾಕಷ್ಟು ತಿಂಗಳು ಹಿಂದೆಯೇ ಪರಿಚಯವಾಗಿ ದೈಹಿಕ ಸಂಪರ್ಕ ಹೊಂದಿದ್ದರು. ರಾಜೇಂದ್ರ ನಾಯಕ್ ಚೆನ್ನೈನಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು, ಈ ಕಮಲಾಳನ್ನು ನೋಡಲು ಆಗಾಗ ಒಡಿಶಾಗೆ ಆಗಮಿಸುತ್ತಿದ್ದ. ಂತೆಯೇ ಕಳೆದ ಬುಧವಾರ ಸಂಜೆಯೂ ಹರಿಚಂದನ್ ಪುರದಲ್ಲಿರೋ ಮಹಿಳೆಯ ಮನೆ ಬಂದು ಸಾಕಷ್ಟು ಸಮಯ ಆಕೆ ಜೊತೆ ಕಳೆದಿದ್ದಾನೆ.
ಬಳಿಕ ಅಂದೇ ಆತ ವಾಪಸ್ ಆಗಬೇಕಿತ್ತು. ಆದರೆ ರಾತ್ರಿಯಾದ ಹಿನ್ನಲೆಯಲ್ಲಿ ಆತ ಅಲ್ಲಿಯೇ ಉಳಿಯಲು ನಿರ್ಧರಿಸಿದ್ಧ. ರಾತ್ರಿ ಊಟವಾದ ಬಳಿಕ ಇಬ್ಬರೂ ಮಾತನಾಡುತ್ತಿದ್ದಾಗ ರಾಜೇಂದ್ರ ನಾಯಕ್ ತನ್ನ ಗರ್ಲ್ ಫ್ರೆಂಡ್ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಈ ವೇಳೆ ಕೋಪಗೊಂಡ ಕಮಲಾ ನಾನಿರುವಾಗ ಮತ್ತೋರ್ವ ಸ್ತ್ರೀಯ ಸಂಗವೇಕೆ ಎಂದು ಜಗಳ ಮಾಡಿದ್ದಾಳೆ. ಜಗಳ ತಾರಕ್ಕೇರಿ ರಾಜೇಂದ್ರ ಆಕೆಯನ್ನು ಬೈದಿದ್ದಾನೆ. ಬಳಿಕ ರಾತ್ರಿ ಅಲ್ಲಿಯೇ ಮಲಗಿದ್ದು, ಇದೇ ಸಂದರ್ಭದಲ್ಲಿ ಕಮಲಾ ಹರಿತವಾದ ವಸ್ತುವಿನಿಂದ ಆತನ ಮರ್ಮಾಂಗವನ್ನು ಕತ್ತರಿಸಿ ಹಾಕಿದ್ದಾಳೆ.
ಬಳಿಕ ಆತನನ್ನು ಆಸ್ಪತ್ರೆ ಸಾಗಿಸಲಾಗಿದ್ದು, ಈ ವೇಳೆ ಆತನಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ವಿಷಯ ತಿಳಿದ ಕೂಡಲೇ ಪೊಲೀಸರು ಆಗಮಿಸಿ ಮಹಿಳೆಯನ್ನು ಬಂಧಿಸಿದ್ದಾರೆ. ಅಂತೆಯೇ ಸಂತ್ರಸ್ಥ ರಾಜೇಂದ್ರ ನಾಯಕ್ ನಿಂದ ಹೇಳಿಕೆ ಪಡೆದಿದ್ದು, ಈ ವೇಳೆ ಆತ 'ರಾತ್ರಿ ಮಹಿಳೆ ತನಗೆ ಒತ್ತಾಯಪೂರ್ವಕವಾಗಿ ಮದ್ಯಪಾನ ಮಾಡಿಸಿದ್ದಾಳೆ. ಅತಿಯಾಗಿ ಮದ್ಯ ಸೇವಿಸಿದ್ದರಿಂದ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದೆನು. ಇದನ್ನೇ ಸದುಪಯೋಗಪಡಿಸಿಕೊಂಡ ಮಹಿಳೆ ಮರ್ಮಾಂಗವನ್ನು ಕಟ್ ಮಾಡಿದ್ದಾಳೆ ಎಂದು ಆರೋಪಿಸಿದ್ದಾನೆ.
'ನಾವಿಬ್ಬರು ಫೋನ್ ನಲ್ಲಿ ಮಾತನಾಡುತ್ತಿದ್ದೆವು. ಆದರೆ ನಾನು ಬೇರೆಯವರ ಜೊತೆ ಮಾತನಾಡುತ್ತಿದ್ದಾಗ ಆಕೆ ಅದನ್ನು ಖಂಡಿಸಿದ್ದಳು. ಈ ವಿಚಾರಕ್ಕಾಗಿ ಇಬ್ಬರ ಮಧ್ಯೆ ಜಗಳ ನಡೆದಿದೆ. ನೀನು ನನ್ನ ಜೊತೆ ಮಾತ್ರ ಮಾತಾಡಬೇಕು, ನನ್ನ ಮನೆಗೆ ಬಂದು ಬೇರೆಯವರ ಜೊತೆ ಮಾತನಾಬೇಡ ಅಂತ ತಗಾದೆ ತೆಗೆದಿದ್ದಳು. ಇದೇ ವಿಚಾರದಿಂದ ಸಿಟ್ಟುಗೊಂಡ ಆಕೆ ಈ ಕೃತ್ಯ ಎಸಗಿದ್ದಾಳೆ ಅಂತ ಸಂತ್ರಸ್ತ ಯುವಕ ತಿಳಿಸಿದ್ದಾನೆ.
ಸದ್ಯ ಯುವಕ ಹರಿಚಂದನ್ ಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.